ಬೆಂಗಳೂರು: ‘ಒಂದೆಡೆ ಸ್ವಾತಂತ್ರ್ಯ ಹೋರಾಟ, ಮತ್ತೊಂದೆಡೆ ಜಾತೀಯ ದಂಗೆ ಎಂದು ಬಿಂಬಿತವಾಗಿರುವ ಮಲಬಾರಿನ ‘ಮೋಪ್ಲಾ (ಮಾಪಿಳ್ಳೆ) ದಂಗೆ’ ಹಿಂದೂಗಳ ಭೀಕರ ಹತ್ಯಾಕಾಂಡ’ ಎಂದು ಲೇಖಕ, ಅಂಕಣಕಾರಸಂದೀಪ್ ಬಾಲಕೃಷ್ಣ ಅಭಿಪ್ರಾಯಪಟ್ಟರು.
ರಾಷ್ಟ್ರೋತ್ಥಾನ ಸಾಹಿತ್ಯದ ‘ಕನ್ನಡ ಪುಸ್ತಕ ಹಬ್ಬ’ದ ಅಂಗವಾಗಿ ಕೇಶವಶಿಲ್ಪ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಾರಾಂತ್ಯದ ಉಪನ್ಯಾಸ ಕಾರ್ಯಕ್ರಮದಲ್ಲಿ 'ಮೋಪ್ಲಾ' ನೂರು, ಸಮಸ್ಯೆಗಳು ಸಾವಿರ’ ವಿಷಯವಾಗಿ ಅವರು ಮಾತನಾಡಿದರು.
‘ದೇಶದ ಸ್ವಾತಂತ್ರ್ಯ ಸಂಗ್ರಾಮದ ನಿಜವಾದ ಇತಿಹಾಸವನ್ನು ತಿರುವು-ಮುರುವುಗೊಳಿಸಿದ ಕಾಂಗ್ರೆಸ್ ಮತ್ತು ಎಡಪಂಥೀಯ ನಾಯಕರ ಕಾರ್ಯಸೂಚಿಯಿಂದಾಗಿ ಈ ಪ್ರಮುಖ ದಂಗೆ ತೆರೆಮರೆಗೆ ಸರಿದಿದೆ’ ಎಂದರು.
‘ಮಾಲೆಗಾಂವ್ ಮತ್ತು ಬಾರಾಬಂಕಿಯಲ್ಲಿ ಹಿಂದೂ ಹತ್ಯಾಕಾಂಡದ ಮುಂದುವರಿಕೆಯಾಗಿ ಮಲಬಾರಿನಲ್ಲಿ ಯಾವ ಪ್ರಚೋದನೆಯೂ ಇಲ್ಲದೇ ದಂಗೆ ಎದ್ದ ಮುಸ್ಲಿಂ ಸಮುದಾಯ, ಮಲಬಾರಿನಾದ್ಯಂತ ಎಸಗಿದ ಕ್ರೌರ್ಯವನ್ನು ಸ್ವಾತಂತ್ರ್ಯಾನಂತರದ ಎಡರಂಗದ ಆಡಳಿತ ಇತಿಹಾಸದ ಪುಟಗಳಿಂದ ಸಂಪೂರ್ಣ ತೆಗೆದುಹಾಕಿದೆ. ಅಲ್ಲದೆ, ಸುಳ್ಳು ಇತಿಹಾಸ ಸೃಷ್ಟಿಸಿ, ಅಪಚಾರ ಎಸಗಿತು’ ಎಂದು ವಿಶ್ಲೇಷಿಸಿದರು.
‘ವ್ಯಭಿಚಾರ, ಮತಾಂತರ, ಕೊಲೆಗಡುಕ ಇತಿಹಾಸವನ್ನು ಎಷ್ಟು ಮರೆಮಾಚಿದರೂ ಒಂದಿಲ್ಲೊಂದು ದಿನ ವಾಸ್ತವ ಬಹಿರಂಗವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕ ಸಮಾಜ ಈಗ ಕಣ್ಣು ತೆರೆದಿದೆ’ ಎಂದೂ ಅವರು ಹೇಳಿದರು.
ರಾಷ್ಟ್ರೋತ್ಥಾನ ಪ್ರಸರಣ ವಿಭಾಗದ ಮುಖ್ಯಸ್ಥ ಪಾಂಡುರಂಗ ಪ್ರಭು, ಲೇಖಕ ಚೈತನ್ಯ ಮಜಲಕೋಡಿ, ರಾಷ್ಟ್ರೋತ್ಥಾನ ಸಾಹಿತ್ಯದ ವಿಶ್ವೇಶ್ವರ ಭಟ್ ಇದ್ದರು.
ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ರಾಷ್ಟ್ರೋತ್ಥಾನ ಸಾಹಿತ್ಯ ಹಮ್ಮಿಕೊಂಡಿರುವ ಈ ಕನ್ನಡ ಪುಸ್ತಕ ಹಬ್ಬ ನ. 27ರವರೆಗೆ ನಡೆಯಲಿದೆ. ಹಬ್ಬದಲ್ಲಿ ಪುಸ್ತಕ ಪುದರ್ಶನ ಮತ್ತು ಮಾರಾಟ, ಪುಸ್ತಕ ಬಿಡುಗಡೆ, ವಿಶೇಷ ಉಪನ್ಯಾಸ ಸಂವಾದ ನಡೆಯಲಿದೆ. ರಾಷ್ಟ್ರೋತ್ಥಾನ ಸಾಹಿತ್ಯದ ಮಾತ್ರವಲ್ಲದೆ ಇತರ ಸಾಹಿತ್ಯಗಳೂ ಇಲ್ಲಿ ಲಭ್ಯವಿದ್ದು, ಶೇ 50ರವರೆಗೂ ರಿಯಾಯಿತಿ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.