ಬೆಂಗಳೂರು: ಸಾರಕ್ಕಿ ಕೆರೆ ಪುನರುಜ್ಜೀವನ ಕಾಮಗಾರಿ ಮತ್ತೊಮ್ಮೆ ನನೆಗುದಿಗೆ ಬಿದ್ದಿದೆ. ₹5 ಕೋಟಿ ಮೊತ್ತದಲ್ಲಿ ನಡಿಗೆ ಪಥ, ಕಲ್ಯಾಣಿಗಳ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಜಲಮಂಡಳಿಯಿಂದ ಬಾಕಿ ಇರುವ ಒಳಚರಂಡಿ ಕಾಮಗಾರಿ ತೊಡಕಾಗಿ ಪರಿಣಮಿಸಿದೆ.
ಸಾರಕ್ಕಿ ಕೆರೆ ಎಂದರೆ ಅತ್ಯಂತ ಸಮೃದ್ಧಿಯಿಂದ ಕೂಡಿದ್ದ ಜಲಕಾಯ. ಒತ್ತುವರಿ ತೆರವುಗೊಳಿಸಿದ ಬಳಿಕ 2017ರಲ್ಲಿ ಕೆರೆಯ ಪುನರುಜ್ಜೀವನಕ್ಕೆ ಬಿಬಿಎಂಪಿ ಚಾಲನೆ ಸಿಕ್ಕಿತು. ನಗರೋತ್ಥಾನ ಯೋಜನೆಯಡಿ ಬಿಬಿಎಂಪಿ ₹6.14 ಕೋಟಿಯನ್ನುಈ ಕೆರೆ ಅಭಿವೃದ್ಧಿಗೆ ನಿಗದಿ ಮಾಡಿತು.
ಕೆರೆಸುತ್ತಲೂ ವಾಯುವಿಹಾರಕ್ಕಾಗಿ 3.2 ಕಿ.ಮೀ. ಉದ್ದದ ಪಥ, ಮಳೆ ನೀರು ಸಂಗ್ರಹಿಸಿ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವುದು, ದೋಣಿ ವಿಹಾರಕ್ಕೆ ವ್ಯವಸ್ಥೆ ಕಲ್ಪಿಸಿ ನಗರದ ಪ್ರವಾಸಿ ತಾಣವನ್ನಾಗಿ ರೂಪಿಸುವುದು ಯೋಜನೆಯ ಮುಖ್ಯ ಉದ್ದೇಶ.
ನಿಗದಿಯಂತೆ ಕಾಮಗಾರಿ 2018 ಜೂನ್ನಲ್ಲಿ ಆರಂಭವಾಗಿ, 2019ರ ಏಪ್ರಿಲ್ 17ರಂದು ಮುಕ್ತಾಯವಾಗಬೇಕಿತ್ತು. ಆದರೆ, ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ. ಸುತ್ತಲೂ ಏರಿ ನಿರ್ಮಿಸುವ ಕೆಲಸವೂ ಪೂರ್ಣಗೊಂಡಿದೆ. ಎಸ್ಟಿಪಿಯಲ್ಲಿ ಶುದ್ಧೀಕರಿಸಿದ ನೀರನ್ನು ಕೆರೆಗೆ ಹರಿಸಲಾಗುತ್ತಿದೆ. ಇಡೀ ಜಲಕಾಯ ತಿಳಿನೀರಿನಿಂದ ನಳನಳಿಸುತ್ತಿದೆ. ಸೊಳ್ಳೆಗಳ ತಾಣವಾಗಿದ್ದ ಜಾಗ ಈಗ ವಾಯುವಿಹಾರಿಗಳನ್ನು ಕೈಬೀಸಿ ಕರೆಯುತ್ತಿದೆ. ಪ್ರತಿನಿತ್ಯ ಸಾವಿರಾರು ಜನ ಈ ಕೆರೆಯ ಸುತ್ತ ವಾಯುವಿಹಾರ ನಡೆಸುತ್ತಿದ್ದಾರೆ. ಜಲಕಾಯದಲ್ಲಿ ಮೀನು ಸಾಕಾಣಿಕೆ ಆರಂಭಿಸಿದ್ದು, ಪಕ್ಷಿಗಳು ಬೀಡು ಬಿಡಲು ಆರಂಭಿಸಿವೆ.
ಇದರ ನಡುವೆ, ಒಂದೆರಡು ಕಡೆ ಒಳಚರಂಡಿ ನೀರು ಹರಿದು ಬರುವುದು ತಪ್ಪಿಲ್ಲ. ನಡಿಗೆ ಪಥ ಅಭಿವೃದ್ಧಿ, ಕಲ್ಯಾಣಿಗಳ ಪುನರುಜ್ಜೀವನ, ಪ್ರವೇಶದ್ವಾರ ಅಭಿವೃದ್ಧಿ, ಸಣ್ಣ ಕಾಲುವೆಗಳ ನಿರ್ಮಾಣ ಕಾಮಗಾರಿಗಳು ಇನ್ನೂ ಆರಂಭವಾಗಿಯೇ ಇಲ್ಲ. ಉಳಿದೆಲ್ಲಾ ಕಾಮಗಾರಿಗೆ ₹5 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆಯನ್ನು ಬಿಬಿಎಂಪಿ ಪೂರ್ಣಗೊಳಿಸಿದೆ. ಆದರೆ, ಕಾಮಗಾರಿ ಆರಂಭಕ್ಕೆ ತೊಡಕೊಂದು ಎದುರಾಗಿದೆ.
‘ಜಲಕಾಯದ ಏರಿಯೊಳಗೆ ಕೊಳಚೆ ನೀರಿನ ಪೈಪ್ಲೈನ್ ಹಾದು ಹೋಗಿದೆ. ಅದರಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗದೆ ಕೆರೆಗೆ ಸೇರಿಕೊಳ್ಳುತ್ತಿದೆ. ಪೈಪ್ಲೈನ್ ಬದಲಿಸುವ ಕೆಲಸವನ್ನು ಸದ್ಯದಲ್ಲೇ ಆರಂಭಿಸುವುದಾಗಿ ಜಲಮಂಡಳಿ ಹೇಳಿದೆ. ಇದಕ್ಕಾಗಿ ಕಾಯುತ್ತಿದ್ದೇವೆ. ಜಲಮಂಡಳಿ ತನ್ನ ಕೆಲಸ ಮುಗಿಸಿದರೆ, ನಡಿಗೆ ಪಥ ಸೇರಿ ಉಳಿದೆಲ್ಲಾ ಕಾಮಗಾರಿಯನ್ನೂ ಆರಂಭಿಸಲಾಗುವುದು’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.
ಏರಿ ಮೇಲೆ 1,400 ಗಿಡ
ಏರಿಯ ಉದ್ದಕ್ಕೂ ಒಂದು ಬದಿಯಲ್ಲಿ ಸಸಿಗಳನ್ನು ನೆಡಲಾಗಿದೆ. ಮೆಟ್ರೊ ರೈಲು ಮಾರ್ಗಕ್ಕೆ ಹಲವೆಡೆ ಕಡಿದಿರುವ ಮರಗಳ ಬದಲಿಗೆ ಇಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲುಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮ(ಬಿಎಂಆರ್ಸಿಎಲ್) ಮುಂದಾಗಿದೆ.
‘ಸದ್ಯ 1,400 ಸಸಿಗಳನ್ನು ನೆಡಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಹೇಳುತ್ತಿದ್ದಾರೆ. ಇನ್ನೂ 500ಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಲು ಅವಕಾಶ ಇದೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ (ಕೆರೆ) ಬಿ.ಟಿ. ಮೋಹನಕೃಷ್ಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.