ಬೆಂಗಳೂರು: ಕರ್ನಾಟಕ ರೇಷ್ಮೆ ಉದ್ಯಮ ನಿಗಮದ ವತಿಯಿಂದ ರಿಯಾಯಿತಿ ದರದ ಸೀರೆ ಮಾರಾಟದಲ್ಲಿ ದುರುಪಯೋಗ ನಡೆದಿದೆ ಎಂದು ಕೆಲವು ಮಹಿಳೆಯರು ಆರೋಪಿಸಿದ್ದಾರೆ.
‘ಸೆ. 11ರಂದು ನಿಗಮದ ವತಿಯಿಂದ ₹ 14 ಸಾವಿರ ಮೌಲ್ಯದ ಮೈಸೂರು ಸಿಲ್ಕ್ಸ್ ಸೀರೆಗಳನ್ನು ನಿಗಮವು ₹ 4,500ಕ್ಕೆ ಮಾರಾಟಕ್ಕಿರಿಸಿತ್ತು. ದೊಡ್ಡ ಸಂಖ್ಯೆಯಲ್ಲಿ ಬಂದ ಮಹಿಳೆಯರು ಅಂದು ತಮ್ಮ ಆಧಾರ್ ಕಾರ್ಡ್ ನೀಡಿ ಕೂಪನ್ ಪಡೆದು ಸರದಿಯಲ್ಲಿ ಕಾದಿದ್ದರು. ಅಂದು ಕೆಲವರಿಗಷ್ಟೇ ಸೀರೆ ಸಿಕ್ಕಿತ್ತು. ಮರುದಿನವೂ ಬಂದ ಕೆಲವರು ಕೂಪನ್ ಇಲ್ಲದೆಯೇ ನಿಗಮದ ಸಿಬ್ಬಂದಿ, ಪೊಲೀಸರ ನೆರವಿನಿಂದ 2, 3 ಸೀರೆಗಳನ್ನು ಪಡೆದಿದ್ದಾರೆ. ಪ್ರಶ್ನಿಸಿದರೆ ಪೊಲೀಸರ ಮೂಲಕ ನಮ್ಮನ್ನು ಗದರಿಸಿದ್ದಾರೆ’ ಎಂದು ಗ್ರಾಹಕರಾದ ರತ್ನಾ ಆರೋಪಿಸಿದರು.
ಕೆಲವರು ಕೂಪನ್ಗಳನ್ನು ₹ 700ರಿಂದ ₹ 2 ಸಾವಿರದವರೆಗೆ ಮಾರಾಟ ಮಾಡಿದ್ದಾರೆ. ಅಗತ್ಯವುಳ್ಳವರಿಗೆ ಒಂದೂ ಸೀರೆ ಸಿಗದಂತಾಗಿದೆ ಎಂದು ಅವರು ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಕೆಎಸ್ಐಸಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಭಾನುಪ್ರಕಾಶ್, ‘ರಿಯಾಯಿತಿ ದರದ ಮಾರಾಟವನ್ನು ಕೆಲವು ಗ್ರಾಹಕರು ದುರುಪಯೋಗ ಮಾಡಿಕೊಂಡಿದ್ದಾರೆ. ಆದರೆ, ಇವೆಲ್ಲವೂ ಮಳಿಗೆಯ ಹೊರಗೆ ನಡೆದಿದೆ. ಜನರೇ ಈ ರೀತಿ ಮಾಡಿದರೆ ನಾವೇನೂ ಮಾಡಲಾಗದು. ಇದರಲ್ಲಿ ನಿಗಮದ ಸಿಬ್ಬಂದಿ ಅಥವಾ ಅಧಿಕಾರಿಗಳ ಪಾತ್ರವಿಲ್ಲ. ಸೀರೆಗಳು ಮಾರಾಟವಾದ ಲೆಕ್ಕಾಚಾರ ನಡೆಯುತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.