ಬೆಂಗಳೂರು:ಈಶಾ ಫೌಂಡೇಷನ್ನ ಸಂಸ್ಥಾಪಕಸದ್ಗುರುಜಗ್ಗಿವಾಸುದೇವ್ ಅವರು ಮಣ್ಣಿನ ಸಂರಕ್ಷಣೆ ಕುರಿತು ಜಾಗತಿಕವಾಗಿ ಅರಿವು ಮೂಡಿಸುವ ಸಲುವಾಗಿ ಆರಂಭಿಸಿರುವ ‘ಮಣ್ಣು ಉಳಿಸಿ’ (ಸೇವ್ ಸಾಯಿಲ್) ಆಂದೋಲನಕ್ಕೆ ರಾಜ್ಯದ ಜನಪ್ರತಿನಿಧಿಗಳು ಬೆಂಬಲ ಸೂಚಿಸಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ನಾಯಕ ಎಸ್.ಎಂ.ಕೃಷ್ಣ, ಬಿಜೆಪಿ ಶಾಸಕರಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಂಸದ ಡಿ.ವಿ.ಸದಾನಂದ ಗೌಡ, ಕಾಂಗ್ರೆಸ್ ಮುಖಂಡ ಎಂ.ವೀರಪ್ಪ ಮೊಯಿಲಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಅಭಿಯಾನಕ್ಕೆ ಕೈಜೋಡಿಸಿದ್ದಾರೆ.
ಮಣ್ಣಿಗೆ ಸಂಬಂಧಿಸಿದಂತೆ 192 ದೇಶಗಳಲ್ಲಿ ಒಂದು ನೀತಿ ತರುವುದು ಆಂದೋಲನದ ಉದ್ದೇಶ.ಮುಂದಿನ ಪೀಳಿಗೆಗಾಗಿ ಮಣ್ಣು ಉಳಿಸುವುದು ಅಭಿಯಾನದ ಆಶಯವಾಗಿದೆ.
ಆಂದೋಲನದ ಅಂಗವಾಗಿ ಸದ್ಗುರು ಅವರು 100 ದಿನಗಳ ಕಾಲ 27 ರಾಷ್ಟ್ರಗಳಲ್ಲಿ ಒಟ್ಟು 30 ಸಾವಿರ ಕಿ.ಮೀವರೆಗೆ ಮೋಟರ್ ಬೈಕ್ನಲ್ಲಿ ಏಕಾಂಗಿ ಪ್ರಯಾಣ ನಡೆಸಲಿದ್ದಾರೆ. ಕಾವೇರಿ ಕೊಳ್ಳ ಪ್ರದೇಶದಲ್ಲಿ ಅಭಿಯಾನ ಕೊನೆಗೊಳ್ಳಲಿದೆ.
‘ಸದ್ಗುರು ಅವರು ಜೂನ್ 19ರಂದು ಕರ್ನಾಟಕ ತಲುಪಲಿದ್ದಾರೆ. ಅರಮನೆ ಮೈದಾನದಲ್ಲಿ ನಿಗದಿಯಾಗಿರುವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ಈಶಾ ಫೌಂಡೇಷನ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.