ಬೆಂಗಳೂರು: ‘ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಯಲ್ಲಿ ಸವಿತಾ ಸಮಾಜದವರು ಜಾತಿ ಕಾಲಂನಲ್ಲಿ ‘ಸವಿತಾ’ ಎಂದೇ ನಮೂದಿಸಬೇಕು’ ಎಂದು ಕೊಂಚೂರು ಸವಿತಾ ಪೀಠದ ಸವಿತಾನಂದನಾಥ ಸ್ವಾಮೀಜಿ ಹೇಳಿದರು.
ಕರ್ನಾಟಕ ರಾಜ್ಯ ಸವಿತಾ ಸಮಾಜ ನೌಕರರ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸವಿತಾ ಸಮಾಜದವರ ನಿಖರ ಸಂಖ್ಯೆ ತಿಳಿಯಲು ಧರ್ಮದ ಕಾಲಂನಲ್ಲಿ ಹಿಂದೂ ಎಂದು, ಜಾತಿಯ ಕಾಲಂನಲ್ಲಿ ಸವಿತಾ ಎಂದು ನಮೂದಿಸಬೇಕು. ಉಪಜಾತಿಗಳನ್ನು ಜಾತಿ ಕಾಲಂನಲ್ಲಿ ನಮೂದಿಸಿದರೆ, ಸಮಾಜದ ಜನಸಂಖ್ಯೆ ಕಡಿಮೆ ಆಗಲಿದೆ. ಸಮೀಕ್ಷೆ ವೇಳೆ ಸಂಬಂಧಿಸಿದ ಎಲ್ಲ ವಿವರಗಳನ್ನು ನಿಖರವಾಗಿ ಒದಗಿಸಬೇಕು. ಉಪಜಾತಿ ಕಾಲಂನಲ್ಲಿ ಮೂಲ ಜಾತಿಯ ಹೆಸರನ್ನು ನಮೂದಿಸಬಹುದು’ ಎಂದರು.
‘ನಯನಜ ಕ್ಷತ್ರಿಯ, ಭಂಡಾರಿ, ಭಜಂತ್ರಿ, ನಾವಿ, ಹಡಪದ, ಕ್ಷೌರಿಕ, ನಾಪಿತ, ಮಹಲೆ, ಮೇಲಗಾರ, ನಾವಿ ಸೇರಿದಂತೆ ಸಮಾಜದಲ್ಲಿ 27 ಉಪಜಾತಿಗಳಿವೆ. ಎಲ್ಲರೂ ಜಾತಿಯನ್ನು ಸವಿತಾ ಎಂದೇ ನಮೂದಿಸಬೇಕು. ರಾಜ್ಯದಲ್ಲಿ ಸಮಾಜದ ಜನರ ಸಂಖ್ಯೆ ಸುಮಾರು 12 ಲಕ್ಷದಿಂದ 15 ಲಕ್ಷದಷ್ಟಿದ್ದು, ಸಮಾಜದ ವತಿಯಿಂದಲೂ ಆಂತರಿಕ ಸಮೀಕ್ಷೆ ನಡೆಸಲು ಆ್ಯಪ್ ಸಿದ್ಧಪಡಿಸಲಾಗಿದೆ. ನಮ್ಮ ಸಮೀಕ್ಷೆ ಹಾಗೂ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಮೀಕ್ಷೆಯ ಅಂಕಿ–ಅಂಶ ಹೋಲಿಕೆಯಾಗುತ್ತದ್ದೆಯೇ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ’ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸವಿತಾ ಸಮಾಜ ನೌಕರರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಕೆ.ವಿ. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.