ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗದ ಕಾರಣ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಜುಲೈ ತಿಂಗಳಿನಿಂದ ಡಿಸೆಂಬರ್ವರೆಗೆ ದೂರದರ್ಶನ (ಚಂದನ ವಾಹಿನಿ) ಮೂಲಕ ಪಾಠ ಪ್ರಸಾರ ಮಾಡಲು ₹ 1.60 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಕಾರ್ಯಕ್ರಮದ ಪ್ರಯೋಜನವನ್ನು ಹೆಚ್ಚು ಮಕ್ಕಳು ಪಡೆಯುವಂತಾಗಲು ಈ ಬಗ್ಗೆ ಪ್ರಚಾರ ನೀಡಲು ಮತ್ತು ಯೂ ಟ್ಯೂಬ್ನಲ್ಲಿ ಪಾಠದ ವಿಡಿಯೊ ಲಭ್ಯವಾಗುವಂತೆ ಮಾಡಲು ಕೂಡಾ ಉದ್ದೇಶಿಸಲಾಗಿದೆ.
ಈ ಕುರಿತು ವಿಶೇಷವಾಗಿ ಪ್ರಚಾರ ಮಾಡಲು ಮತ್ತು ಪಾಠಗಳನ್ನು ವೀಕ್ಷಿಸುವಂತೆ ಟಿ.ವಿ ವ್ಯವಸ್ಥೆ ಮಾಡುವ ಹೊಣೆಗಾರಿಕೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ವಹಿಸಲಾಗಿದೆ. ಒಬ್ಬ ಶಿಕ್ಷಕರಿಗೆ 20 ಮಕ್ಕಳ ಹೊಣೆ ನೀಡಬೇಕು. ಒಂದು ತಿಂಗಳು ಪಾಠ ಪ್ರಸಾರ ಆದ ಬಳಿಕ ವಿದ್ಯಾರ್ಥಿಗಳಿಗೆ ಕಿರು ಪರೀಕ್ಷೆ ನಡೆಸಲು ಕ್ರಮ ತೆಗೆದುಕೊಳ್ಳಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ವೆಚ್ಚ ಎಷ್ಟು: 30 ನಿಮಿಷಗಳ ಎಂಟು ಅವಧಿಯ ಪಾಠಗಳ (ಒಟ್ಟು 4 ಗಂಟೆ) 120 ದಿನಗಳ ಪ್ರಸಾರಕ್ಕೆ ಗಂಟೆಗೆ ₹24,426ರಂತೆ ದೂರದರ್ಶನಕ್ಕೆ ರಾಜ್ಯ ಸರ್ಕಾರ ₹ 1.17ಕೋಟಿ ಪಾವತಿಸಬೇಕು. ಅಲ್ಲದೆ, ಸಂಪನ್ಮೂಲ ಶಿಕ್ಷಕರ ದಿನ ಭತ್ಯೆ, ಪ್ರಯಾಣ ಭತ್ಯೆ ಮತ್ತು ಸಂಭಾವನೆಯಾಗಿ960 ಗಂಟೆಗೆ ತಲಾ ₹ 2,000ದಂತೆ ಒಟ್ಟು ₹ 19.20 ಲಕ್ಷ, ತಾಂತ್ರಿಕ ತಂಡದವರಿಗೆ 960 ಗಂಟೆಗೆ ತಲಾ ₹500ರಂತೆ ₹ 4.8 ಲಕ್ಷ, 15 ಮಂದಿಯ ಉಪಾಹಾರಕ್ಕೆ ₹ 5.25 ಲಕ್ಷ, ಸ್ಟುಡಿಯೊದ ಹೆಚ್ಚುವರಿ ಉಪಕರಣಗಳ ಬಾಡಿಗೆ ₹ 5 ಲಕ್ಷ, 2 ವಾಹನಗಳ ಲಾಜಿಸ್ಟಿಕ್ಸ್ಗೆ ₹ 6 ಲಕ್ಷ, ಇತರ ₹ 3 ಲಕ್ಷದ ವೆಚ್ಚದ ಕ್ರಿಯಾ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.