ಬೆಂಗಳೂರು: ‘ಅಂತರರಾಷ್ಟ್ರೀಯ ವಿಜ್ಞಾನ ಹಬ್ಬವನ್ನು ಭೋಪಾಲ್ನಲ್ಲಿ ಇದೇ 21ರಿಂದ 24ರವರೆಗೆ ಹಮ್ಮಿಕೊಳ್ಳಲಾಗಿದೆ. ‘ಒಂದು ಭೂಮಿ, ಒಂದು ಕುಟುಂಬ, ಒಂದೇ ಭವಿಷ್ಯ’ ಈ ವರ್ಷದ ಘೋಷವಾಕ್ಯವಾಗಿದೆ’ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಎಂ. ರಮೇಶ್ ತಿಳಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ವಿಜ್ಞಾನ ಹಬ್ಬವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸುತ್ತಿದೆ. ದೇಶ–ವಿದೇಶದ ವಿಜ್ಞಾನಿಗಳು, ತಂತ್ರಜ್ಞರು, ನೀತಿ ನಿರೂಪಕರು, ಕುಶಲಕರ್ಮಿಗಳು, ನವೋದ್ಯಮಿಗಳು, ರೈತರು, ಸಂಶೋಧಕರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ‘ವಿಜ್ಞಾನ, ತಂತ್ರಜ್ಞಾನ ಹಾಗೂ ಆವಿಷ್ಕಾರಗಳ ನಡಿಗೆ ಅಮೃತಕಾಲದೆಡೆಗೆ’ ಎಂಬ ವಿಷಯದ ಮೇಲೆ ವಿಜ್ಞಾನದ ಹಬ್ಬ ನಡೆಯಲಿದೆ. ವಿಜ್ಞಾನಕ್ಕೆ ಸಂಬಂಧಿಸಿದ ಚಲನಚಿತ್ರಗಳ ಪ್ರದರ್ಶನಗಳನ್ನೂ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
‘ಹಬ್ಬದಲ್ಲಿ 1,500 ಯುವ ವಿಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ. ಭಾರತದ ವೈಜ್ಞಾನಿಕ ಮತ್ತು ತಾಂತ್ರಿಕ ಸಾಧನೆಗಳನ್ನು ಅನಾವರಣ ಮಾಡುವ ವಿಜ್ಞಾನ ವಸ್ತು ಪ್ರದರ್ಶನವೂ ನಡೆಯಲಿದೆ. ವಿದ್ಯಾರ್ಥಿಗಳು ರೂಪಿಸುವ ವಿಜ್ಞಾನ ಗ್ರಾಮವು ಹಬ್ಬದ ಆಕರ್ಷಣೆ ಆಗಿರಲಿದೆ. ವಿಜ್ಞಾನ ಸಾಹಿತ್ಯಕ್ಕೆ ವೇದಿಕೆ ಒದಗಿಸಲು ‘ವಿಜ್ಞಾನಿಕಾ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ವಿಜ್ಞಾನಿ ಕಿಂಕಣಿ ದಾಸ್ ಗುಪ್ತಾ, ‘ವಿಜ್ಞಾನದ ಮಹತ್ವವನ್ನು ಸಾರುವುದು ಹಾಗೂ ಈ ಕ್ಷೇತ್ರದ ಇತ್ತೀಚಿನ ಆವಿಷ್ಕಾರಗಳ ಬಗ್ಗೆ ತಿಳಿಯುವುದು ಈ ಹಬ್ಬದ ಉದ್ದೇಶವಾಗಿದೆ. ವಿಜ್ಞಾನಿಗಳ ಸಮ್ಮುಖದಲ್ಲಿ ಚರ್ಚೆಗಳನ್ನೂ ನಡೆಸಲಾಗುತ್ತದೆ. 2015ರಲ್ಲಿ ಈ ಹಬ್ಬ ಪ್ರಾರಂಭವಾಗಿದ್ದು, ಇದು 8ನೇ ಆವೃತ್ತಿಯಾಗಿದೆ’ ಎಂದು ಹೇಳಿದರು.
ವಿಜ್ಞಾನ ಬರಹಗಾರ ಕೊಳ್ಳೇಗಾಲ ಶರ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.