ADVERTISEMENT

ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ: ಅಭಿವೃದ್ಧಿ ಸೂಚ್ಯಂಕ ವಿಶ್ಲೇಷಣೆ ನಾಳೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2022, 20:34 IST
Last Updated 23 ಏಪ್ರಿಲ್ 2022, 20:34 IST
ಚಂದ್ರಶೇಖರಯ್ಯ
ಚಂದ್ರಶೇಖರಯ್ಯ   

ಬೆಂಗಳೂರು: ಯೋಜನಾ ಇಲಾಖೆ ಹಾಗೂ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿ ಮತ್ತು ನೌಕರರ ಸಂಘದ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಸೂಚ್ಯಂಕ ಮತ್ತು ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಬುಡಕಟ್ಟು ಉಪಯೋಜನೆ (ಟಿಎಸ್‌ಪಿ) ಅಡಿ ವೆಚ್ಚ ಮಾಡಿದ ಅನುದಾನ ಬಳಕೆ ಕುರಿತ ವಿಶ್ಲೇಷಣೆಗೆ ಕಾರ್ಯಗಾರ ಹಮ್ಮಿಕೊಂಡಿದೆ.

ಅಂಬೇಡ್ಕರ್‌ ಅವರ 131ನೇ ಜಯಂತಿ ಅಂಗವಾಗಿ ವಿಕಾಸಸೌಧದ ನಾಲ್ಕನೇ ಮಹಡಿಯಲ್ಲಿ (ಕೊಠಡಿ ಸಂಖ್ಯೆ 419) ಇದೇ 25ರಂದು ಕಾರ್ಯಕ್ರಮ ನಡೆಯಲಿದೆ.

‘ಎಸ್‌ಸಿಎಸ್‌ಪಿ– ಟಿಎಸ್‌ಪಿ ಯೋಜನೆಯಡಿ 2014ರಿಂದ 2021ರವರೆಗೆ ಸುಮಾರು ₹ 120 ಲಕ್ಷ ಕೋಟಿ ವೆಚ್ಚವಾಗಿದ್ದು, ಲಭ್ಯವಿರುವ ಸುಮಾರು 20 ಲಕ್ಷ ಕುಟುಂಬಗಳಿಗೆ ಕನಿಷ್ಠ ₹ 1 ಕೋಟಿ ತಲುಪಿದಂತಾಗಿದೆ. ಆದರೆ, ವಾಸ್ತವಿಕವಾಗಿ ಒಂದು ರೂಪಾಯಿಯೂ ತಲುಪದ ಕುಟುಂಬಗಳಿವೆ. ಅಭಿವೃದ್ಧಿ ಕೊರತೆ ಇರುವ ಕ್ಷೇತ್ರಗಳನ್ನು ಗುರುತಿಸಿ, ಅಭಿವೃದ್ಧಿಗೆ ಯೋಜನೆ ರೂಪಿಸದಿರುವುದು ಇದಕ್ಕೆ ಕಾರಣ. ಆದ್ದರಿಂದ, ಯಾವ ಕ್ಷೇತ್ರಗಳಿಗೆ ಎಸ್‌ಸಿಎಸ್‌ಪಿ– ಟಿಎಸ್‌ಪಿ ಅನುದಾನ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಯೋಜನೆ ರೂಪಿಸುವ ಅಗತ್ಯವಿದೆ’ ಎಂದು ಅಭಿವೃದ್ಧಿ ಸೂಚ್ಯಂಕ ಕುರಿತು ವಿಚಾರ ಮಂಡಿಸಲಿರುವ ಯೋಜನಾ ಇಲಾಖೆಯ ಪ್ರದೇಶಾಭಿವೃದ್ಧಿ ಮಂಡಳಿಯ ನಿರ್ದೇಶಕ ಡಿ. ಚಂದ್ರಶೇಖರಯ್ಯ ತಿಳಿಸಿದರು.

ADVERTISEMENT

ಕಾರ್ಯಾಗಾರವನ್ನು ಆರ್ಥಿಕ ಮತ್ತು ಸಾಂಖ್ಯಿಕ ಸಚಿವ ಮುನಿರತ್ನ ಉದ್ಘಾಟಿಸಲಿದ್ದು, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅಧ್ಯಕ್ಷತೆ ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.