ಬೆಂಗಳೂರು: ಬಂಜಾರ ಜನಾಂಗದ ಧಾರ್ಮಿಕ ಗುರುಗಳಾದ ದಾರ್ಶನಿಕ ಸಂತ ಸೇವಾಲಾಲರ 280ನೇ ಜಯಂತಿಯನ್ನು ಮೂರು ದಿನ ನಡೆಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
‘ದಾವಣಗೆರೆ ಜಿಲ್ಲೆಯ ಸೂರಗೊಂಡನಕೊಪ್ಪದ ಬಳಿ ಇರುವ ಭಾಯಾಗಡ್ ಎಂಬಲ್ಲಿ ಸಂತ ಸೇವಾಲಾಲ್ ಅವರು 1739ರಲ್ಲಿ ಜನಿಸಿದರು. ಅವರ ಜನ್ಮಸ್ಥಳದಲ್ಲಿ ಪ್ರತಿ ವರ್ಷವೂ ಎರಡು ದಿನಗಳ ವಿಶೇಷ ಕಾರ್ಯಕ್ರಮ ನಡೆಯುತ್ತದೆ. ಈ ತಿಂಗಳ 14ರಂದು ಬೆಳಿಗ್ಗೆ ಕಾಟಿ ಆರೋಹಣದ ಮೂಲಕ ಕಾರ್ಯಕ್ರಮ ಆರಂಭಗೊಳ್ಳುತ್ತದೆ ಹಾಗೂ ಸಂಜೆಯವರೆಗೂ ವಿವಿಧ ಸೇವೆಗಳು ನಡೆಯಲಿವೆ. 15ರಂದು ಮಧ್ಯಾಹ್ನ ಸಂತ ಸೇವಾಲಾಲರ 280ನೇ ಜಯಂತಿಯ ಮುಖ್ಯ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಅವರು ತಿಳಿಸಿದರು.
15ರಂದು ಬೆಂಗಳೂರಿನಲ್ಲಿ ಸಂತ ಸೇವಾಲಾಲರ ಜಯಂತಿ ಆಯೋಜಿಸಲಾಗಿದೆ. ಮಧ್ಯಾಹ್ನ 3 ಗಂಟೆ ಬನಪ್ಪ ಉದ್ಯಾನವನದಿಂದ ಮೆರವಣಿಗೆ ಆರಂಭವಾಗಲಿದ್ದು, ರಾಜ್ಯದ ವಿವಿಧ ಸ್ಥಳಗಳಿಂದ ಆಗಮಿಸುವ ಕಲಾ ತಂಡಗಳು ಬಂಜಾರ ಸಂಸ್ಕೃತಿಯನ್ನು ಅನಾವರಣಗೊಳಿಸಲಿವೆ. ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.
ಸೂರಗೊಂಡನಕೊಪ್ಪ ಗ್ರಾಮಕ್ಕೆ ನೂತನ ಸ್ವರೂಪ ನೀಡಲು ನಿರ್ಧರಿಸಿದ್ದು, ಕಲ್ಯಾಣ ಮಂಟಪ, ದಾಸೋಹ ಭವನ, ಆಯುರ್ವೇದ ಆಸ್ಪತ್ರೆ, ವಸತಿಗೃಹ, ಅತಿಥಿಗೃಹ, ಧರ್ಮಶಾಲ, ವೃದ್ಧಾಶ್ರಮ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.