ಬೆಂಗಳೂರು: ‘ಮಾಜಿ ಸಹೋದ್ಯೋಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ’ ಎಂದು ಆರೋಪಿಸಿ ಸ್ಥಳೀಯ ಸುದ್ದಿವಾಹಿನಿಯ ನಿರೂಪಕಿ, 24 ವರ್ಷದ ಯುವತಿಯೊಬ್ಬರು ಕೆಂಗೇರಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಖಾಸಗಿ ಕಂಪನಿಯೊಂದರಲ್ಲಿ ಚಾಲಕನಾಗಿದ್ದ ಮೈಸೂರಿನ ಪ್ರವೀಣ್ ಆರೋಪಿ. ದೂರಿನ ಆಧಾರದಲ್ಲಿ ಪ್ರವೀಣ್ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ. ಕೊರೊನಾ ಹರಡುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ಆತನನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
ಆರೋಪಿಯ ಮೊಬೈಲ್ ಪರಿಶೀಲಿಸಿದಾಗ, ಆತ ಬೇರೆ ಬೇರೆ ಸಿಮ್ ಬಳಸಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿರುವುದು ಗೊತ್ತಾಗಿದೆ ಎಂದೂ ಪೊಲೀಸರು ಹೇಳಿದರು.
‘ಸುದ್ದಿ ವಾಹಿನಿಗೆ ಸೇರುವ ಮೊದಲು ಯುವತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದಳು. ನಿತ್ಯ ಕರೆ ಮಾಡುತ್ತಿದ್ದ ಆರೋಪಿ, ‘ನೀನು ನನ್ನನ್ನು ಮದುವೆಯಾಗಬೇಕು. ಇಲ್ಲದಿದ್ದರೆ ನಿನ್ನನ್ನು ಕೊಲ್ಲುತ್ತೇನೆ’ ಎಂದು ಬೆದರಿಸುತ್ತಿದ್ದ. ಕಿರುಕುಳ ಸಹಿಸಲು ಸಾಧ್ಯವಾಗದೆ ಮೈಸೂರಿನ ಉದಯಗಿರಿ ಠಾಣೆಯಲ್ಲಿ ಯುವತಿ ದೂರು ನೀಡಿದ್ದರು. ಆಗ, ಮತ್ತೊಮ್ಮೆ ಆ ರೀತಿ ಮಾಡುವುದಿಲ್ಲ ಎಂದಿದ್ದ ಆರೋಪಿ, ಡಿಸೆಂಬರ್ನಲ್ಲಿ ಮತ್ತೆ ತನ್ನ ಚಾಳಿ ಮುಂದುವರಿಸಿದ್ದ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.