ADVERTISEMENT

ಔತಣ ಕೂಟಕ್ಕೆ ಕರೆದು ಸಹಪಾಠಿಗೆ ಲೈಂಗಿಕ ದೌರ್ಜನ್ಯ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 16:16 IST
Last Updated 15 ಡಿಸೆಂಬರ್ 2020, 16:16 IST

ಬೆಂಗಳೂರು: ಎಂಜಿನಿಯರಿಂಗ್ ಕಾಲೇಜಿನ ಸಹಪಾಠಿ ಯುವತಿಯನ್ನು ಔತಣಕೂಟಕ್ಕೆ ಕರೆದು ಲೈಂಗಿಕ ದೌರ್ಜನ್ಯ ಎಸಗಲಾಗಿದ್ದು, ಈ ಸಂಬಂಧ ಆರೋಪಿ ತುಷಾರ್ ಎಂಬುವರನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಕೃತ್ಯ ಸಂಬಂಧ ಹೊರರಾಜ್ಯದ ನಿವಾಸಿಯಾಗಿರುವ ಯುವತಿ ದೂರು ನೀಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಂತ್ರಸ್ತ ಯುವತಿ ಹಾಗೂ ಆರೋಪಿ ತುಷಾರ್, ನಗರದ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಾಜರಾಜೇಶ್ವರಿನಗರದ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಆರೋಪಿ ವಾಸವಿದ್ದರು. ಅದೇ ಫ್ಲ್ಯಾಟ್‌ನಲ್ಲಿ ಡಿ. 9ರಂದು ಔತಣಕೂಟ ಇಟ್ಟುಕೊಂಡಿದ್ದರು.’

ADVERTISEMENT

‘ಯುವತಿ ಸೇರಿ ಎಲ್ಲ ಸಹಪಾಠಿಗಳನ್ನು ಆರೋಪಿ, ಔತಣಕೂಟಕ್ಕೆ ಆಹ್ವಾನಿಸಿದ್ದರು. ಫ್ಲ್ಯಾಟ್‌ಗೆ ಬಂದಿದ್ದ ಸಹಪಾಠಿಗಳು, ತಡರಾತ್ರಿ 1 ಗಂಟೆಯವರೆಗೂ ಮದ್ಯ ಕುಡಿದು ಊಟ ಮಾಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

‘ತಡರಾತ್ರಿಯಾಗಿದ್ದರಿಂದ ಸಹಪಾಠಿಗಳೆಲ್ಲರೂ ಫ್ಲ್ಯಾಟ್‌ನಲ್ಲಿ ಮಲಗಿದ್ದರು. ಯುವತಿ ಮಾತ್ರ ಪ್ರತ್ಯೇಕ ಕೊಠಡಿಯಲ್ಲಿ ನಿದ್ರೆಗೆ ಜಾರಿದ್ದರು. ಕೊಠಡಿಗೆ ಹೋಗಿದ್ದ ಆರೋಪಿ, ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಎಚ್ಚರಗೊಂಡಿದ್ದ ಯುವತಿ, ಕೊಠಡಿಯಿಂದ ಹೊರಗೆ ಓಡಿಬಂದು ಕೂಗಾಡಿದ್ದರು’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.