ಬೆಂಗಳೂರು: ಬಸವ ಕೇಂದ್ರದ ವತಿಯಿಂದ ಇದೇ 28ರಿಂದ ಮೂರು ದಿನ ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ‘ಶರಣ ಸಂಸ್ಕೃತಿ ಉತ್ಸವ’ ಏರ್ಪಡಿಸಲಾಗಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ ಈ ಕುರಿತು ಮಾಹಿತಿ ನೀಡಿದರು.
‘ವೈಚಾರಿಕತೆ ಬಿತ್ತುವ, ಸಮಾನತೆ ಸಾರುವ ಉತ್ಸವ ಇದಾಗಿದೆ. ಬಸವಾದಿ ಶರಣರ ಅನುಭವ ಮಂಟಪದ ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರತಿದಿನ ಬೆಳಿಗ್ಗೆ 7.30ಕ್ಕೆ ಸಹಜ ಶಿವಯೋಗ, ಸಂಜೆ 6.30ಕ್ಕೆ ಚಿಂತನಗೋಷ್ಠಿಗಳು ನಡೆಯಲಿವೆ’ ಎಂದರು.
ಡಿಸೆಂಬರ್ 28: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ‘ಬಸವಾದಿ ಶರಣರ ಜೀವಪರ ಕಾಳಜಿ’ ವಿಷಯದ ಕುರಿತು ವಿಚಾರಗೋಷ್ಠಿ, ಹಾಸ್ಯ ಕಲಾವಿದರಾದ ನರಸಿಂಹ ಜೋಷಿ, ಜೀವನ್ ಸಾಬ್ ಅವರಿಂದ ‘ಹಾಸ್ಯ ಸಂಭ್ರಮ’ ನಡೆಯಲಿದೆ.
ಡಿಸೆಂಬರ್ 29: ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಅತಿಥಿಗಳಾಗಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಚಿವ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ. ‘ಬದುಕು ಮತ್ತು ಧನ್ಯತೆಯ ಮಾರ್ಗ’ ವಿಚಾರದ ಕುರಿತು ಚಿಂತನಗೋಷ್ಠಿ, ಸಾಂಸ್ಕೃತಿಕ ಸಂಭ್ರಮ, ನೆರಳು ಬೆಳಕಿನ ಆಟ, ವಚನ ನೃತ್ಯ ಏರ್ಪಡಿಸಲಾಗಿದೆ.
ಡಿಸೆಂಬರ್ 30: ಮರಳೇಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಲಿದ್ದಾರೆ. ‘ಯುವಜನಾಂಗ ಮತ್ತು ಬಹುಮುಖಿ ಕೌಶಲಾಭಿವೃದ್ಧಿ’ ಬಗ್ಗೆ ಚಿಂತನಗೋಷ್ಠಿ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.