ವೈಟ್ ಫೀಲ್ಡ್: ಮಾರತ್ತಹಳ್ಳಿ ಬಳಿಯ ಮುನೇನಕೊಳಾಲು ಎಂಬಲ್ಲಿಚಿಂದಿ ಆಯುವವರು ಕಟ್ಟಿಕೊಂಡಿದ್ದ ಶೆಡ್ಗಳನ್ನು ಕಿಡಿಗೇಡಿಗಳು ಏಕಾಏಕಿ ದಾಳಿ ನಡೆಸಿ ನೆಲಸಮಗೊಳಿಸಿದ್ದಾರೆ. ಪರಿಣಾಮ, ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ.
ನವೀನ್ ರೆಡ್ಡಿ ಎಂಬುವರಿಗೆ ಸೇರಿರುವ ಈ ಜಾಗಕ್ಕೆ ಮೂರು ಜೆಸಿಬಿ ಹಾಗೂ ಬೈಕ್ಗಳಲ್ಲಿ ಗುರುವಾರ ಬೆಳಿಗ್ಗೆ ಬಂದ 50ಕ್ಕೂ ಹೆಚ್ಚು ದುಷ್ಕರ್ಮಿಗಳು, ಕಾರ್ಮಿಕರನ್ನು ಹೆದರಿಸಿ ಶೆಡ್ ತೆರವು ಕಾರ್ಯ ನಡೆಸಿದ್ದಾರೆ. ಈ ಬಗ್ಗೆಜಮೀನು ಮಾಲೀಕರು ಮತ್ತು ಸ್ಥಳೀಯ ಪೊಲೀಸರಿಗೂ ತಿಳಿಸಿರಲಿಲ್ಲ ಎನ್ನಲಾಗಿದೆ.
20ಕ್ಕೂ ಹೆಚ್ಚು ಶೆಡ್ಗಳನ್ನು ನಿರ್ಮಿಸಿದ್ದ ನವೀನ್ ರೆಡ್ಡಿ, ಪಶ್ಚಿಮ ಬಂಗಾಳದವರಿಗೆ 13 ವರ್ಷಗಳಿಂದ ಬಾಡಿಗೆಗೆ ನೀಡಿದ್ದರು.
‘ಮಹಿಳೆಯರು, ಮಕ್ಕಳ ಮೇಲೆ ರಾಕ್ಷಸರಂತೆ ವರ್ತಿಸಿ ಹಲ್ಲೆ ಮಾಡಿದ್ದಾರೆ’ ಎಂದು ಸಂತ್ರಸ್ತ ಹುಸೇನ್ ದೂರಿದರು.
12 ಜನ ವಶಕ್ಕೆ: ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಮೂರು ಜೆಸಿಬಿ, ನಾಲ್ಕು ದ್ವಿಚಕ್ರ ವಾಹನ ಸೇರಿ 12 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಭೂವಿವಾದ:‘ಪಿತ್ರಾರ್ಜಿತವಾಗಿ ನನಗೆ ಬಂದ ಜಮೀನನಲ್ಲಿ ಶೆಡ್ ನಿರ್ಮಿಸಿ ಪಶ್ಚಿಮ ಬಂಗಾಳದವರಿಗೆ ಬಾಡಿಗೆಗೆ ನೀಡಲಾಗಿತ್ತು. ಆದರೆ, ನಾರಾಯಣ ರೆಡ್ಡಿ ಎಂಬುವರ ಹೆಸರು ಹೇಳಿಕೊಂಡು ಬಂದ 50ಕ್ಕೂ ಹೆಚ್ಚು ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಶೆಡ್ಗಳನ್ನು ನೆಲಸಮ ಮಾಡಿದ್ದಾರೆ’ ಎಂದು ಜಮೀನಿನ ಮಾಲೀಕ ನವೀನ್ ರೆಡ್ಡಿ ಹೇಳಿದ್ದಾರೆ.
‘ಈ ಕಾರ್ಯಾಚರಣೆಯಿಂದ ನನಗೆ ₹20 ಲಕ್ಷ ನಷ್ಟವಾಗಿದೆ. ಈ ಜಮೀನು ತಮ್ಮದು ಎಂದು ನಾರಾಯಣ
ರೆಡ್ಡಿಹೇಳುತ್ತಿದ್ದಾರೆ. ಇದನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಿತ್ತು. ಇಲ್ಲದಿದ್ದರೆ ಪೊಲೀಸರ ಗಮನಕ್ಕೆ ತರಬೇಕಿತ್ತು. ಇದೇನೂ ಮಾಡದೆ ಏಕಾಏಕಿ ದಾಳಿ ನಡೆಸಿದ್ದಾರೆ. ಕಾರ್ಮಿಕರು ಮತ್ತು ಅವರ ಕುಟುಂಬದವರು ಆತಂಕದಲ್ಲಿದ್ದಾರೆ’ ಎಂದು ಅವರು ಹೇಳಿದರು.
***
6 ತಿಂಗಳ ಮಗುವಿಗೂ ದುಷ್ಕರ್ಮಿಗಳು ಹೊಡೆದಿದ್ದಾರೆ. ಶೆಡ್ಗಳನ್ನು ತೆರವುಗೊಳಿಸಿದ್ದರಿಂದ ಮಗುವಿಗೆ ಹಾಲುಣಿಸಲೂ ಸಾಧ್ಯವಾಗಲಿಲ್ಲ
-ಕಾಜಲ್, ಸಂತ್ರಸ್ತೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.