ಬೆಂಗಳೂರು: ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ಇಪಿ) ರಾಜ್ಯ ಸರ್ಕಾರ ಜಾರಿಗೊಳಿಸಲು ಹಠಾತ್ ಆಗಿ ನಿರ್ಧರಿಸಿರುವುದು ಪ್ರಜಾತಾಂತ್ರಿಕ ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳ ಸ್ವಾಯತ್ತತೆ ಮೇಲಿನ ಪ್ರಹಾರ’ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯಘಟಕದ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಹೇಳಿದ್ದಾರೆ.
‘ಎನ್ಇಪಿಯು ಬಡವರ ವಿರೋಧಿ, ಕಾರ್ಪೊರೇಟ್ ಪರವಾಗಿದೆ. ಶಿಕ್ಷಣ ತಜ್ಞರ, ಪೋಷಕರ ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯ ಕೂಡ ಪಡೆಯದೆ, ಉನ್ನತ ಶಿಕ್ಷಣ ಸಚಿವರು ಒಮ್ಮುಖ ನಿರ್ಧಾರ ತೆಗೆದುಕೊಂಡು ಎನ್ಇಪಿ ಜಾರಿಗೆ ತರಲು ಹೊರಟಿದ್ದಾರೆ. ಇದು ಸರ್ವಾಧಿಕಾರಿ ಧೋರಣೆ’ ಎಂದೂ ಅವರು ಖಂಡಿಸಿದ್ದಾರೆ.
‘ಈ ನೀತಿಯಡಿ ಭಾಷೆಯನ್ನು ಕೇವಲ ಸಂಪರ್ಕ ಮತ್ತು ಸಂವಹನ ಮಾಧ್ಯಮವಾಗಿ ಕಲಿಸಲಿರುವುದರಿಂದ ಇದು ಭಾಷಾ ಸಂಸ್ಕೃತಿಯನ್ನು ಅವನತಿಗೆ ತಳ್ಳಲಿದೆ. ಜೊತೆಗೆ ವಿದ್ಯಾರ್ಥಿಯೂ ಶೇ 40 ರಷ್ಟು ಅಂಕಗಳನ್ನು (ಕ್ರೆಡಿಟ್ಗಳನ್ನು) ಆನ್ಲೈನ್ ಮೂಲಕವೂ ಪಡೆಯುವ ಅವಕಾಶ ನೀಡುವುದರಿಂದ ವಿಶ್ವವಿದ್ಯಾಲಯಗಳು ಇನ್ನುಮುಂದೆ ಕೇವಲ ಪ್ರಮಾಣಪತ್ರಗಳನ್ನು ವಿತರಿಸುವ ಅಂಗಡಿಗಳಂತಾಗಲಿವೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಹಿಂಬಾಗಿಲಿನ ಮೂಲಕ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಇದನ್ನು ಕೂಡಲೇ ಕೈ ಬಿಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.