ADVERTISEMENT

ಚರಿತ್ರೆ ತಿರುಚುವ ಕಾರ್ಯ ನಡೆಯುತ್ತಿದೆ: ಪಿ.ಜಿ.ಆರ್‌.ಸಿಂಧ್ಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 19:28 IST
Last Updated 19 ಫೆಬ್ರುವರಿ 2019, 19:28 IST
ಶಿವಾಜಿ ಜಯಂತಿ ಅಂಗವಾಗಿ ಮೆರವಣಿಗೆ ನಡೆಯಿತು –ಪ್ರಜಾವಾಣಿ ಚಿತ್ರ
ಶಿವಾಜಿ ಜಯಂತಿ ಅಂಗವಾಗಿ ಮೆರವಣಿಗೆ ನಡೆಯಿತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಚರಿತ್ರೆಯನ್ನು ಯಾರೂ ಅಳಿಸಿ ಹಾಕಲು ಸಾಧ್ಯವಿಲ್ಲ. ಆದರೆ, ದೇಶದಲ್ಲಿ ಅದನ್ನು ತಿರುಚುವ ಕಾರ್ಯ ನಡೆಯುತ್ತಿದೆ’ ಎಂದು ಜೆಡಿಎಸ್‌ ಮುಖಂಡ ಪಿ.ಜಿ.ಆರ್‌.ಸಿಂಧ್ಯ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ‌ ಮತ್ತು ಸಂಸ್ಕೃತಿ‌ ಇಲಾಖೆ ನಗರದಲ್ಲಿ‌ ಮಂಗಳವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶಿವಾಜಿ ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ.‌ ಇಡೀ ಸಮಾಜದ ನಾಯಕರಾದವರನ್ನು ಒಂದು ಸಮುದಾಯದ ನಾಯಕರನ್ನಾಗಿ ಸೀಮಿತಗೊಳಿಸುತ್ತಿರುವುದು ಸರಿಯಲ್ಲ’ ಎಂದರು.

ADVERTISEMENT

‘ಶಿವಾಜಿ ಬರೆದ ಸಾಹಿತ್ಯ ಕನ್ನಡಕ್ಕೆ ತರ್ಜುಮೆ ಮಾಡುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಗೆರಿಲ್ಲಾ ಯುದ್ಧ ಮಾಡಿ: ‘ಶಿವಾಜಿ ನಡೆಸಿದ ‘ಗೆರಿಲ್ಲಾ ಯುದ್ಧ’ ದಮಾದರಿಯಲ್ಲಿಭಾರತೀಯ ಸೇನೆಯು ತಂತ್ರ ರೂಪಿಸಿ ‍ಭಯೋತ್ಪಾದಕರನ್ನು ಸದೆ ಬಡಿಯಬೇಕಿದೆ. ರಾಜ್ಯ ರಕ್ಷಣೆಗೆ ಶಿವಾಜಿ ಅನುಸರಿಸುತ್ತಿದ್ದ ಮಾರ್ಗಗಳನ್ನು ಈಗಲೂ ಬಳಸಬಹುದು’ ಎಂದರು.

‘ಮರಾಠ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಶಿವಾಜಿ ಕುರಿತು ಉಪನ್ಯಾಸ ನೀಡಿದ ಪ್ರಾಧ್ಯಾಪಕ ಕಿರಣ್ ಗಾಜನೂರು, ‘ಆಧುನಿಕ ಚರಿತ್ರೆಯಲ್ಲಿ ಶಿವಾಜಿಯನ್ನು ತಪ್ಪಾಗಿ ಅರ್ಥೈಸಲಾಗಿದೆ.ಅಂತರ್ಜಾಲ, ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳ ಮೂಲಕ ಇತಿಹಾಸವನ್ನು ತಿರುಚಿ ಸಾರಲಾಗುತ್ತಿದೆ. ಮರಾಠ ಸಮುದಾಯ ದೇಶದ ಅಸ್ಮಿತೆ’ ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮಕ್ಕೆ ಸಚಿವರ ಗೈರು

ಛತ್ರಪತಿ ಶಿವಾಜಿ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಶಾಸಕರಾದ ಉದಯ್‌ ಗರುಡಾಚಾರ್‌ ಮತ್ತು ಬಾಳಾಸಾಹೇಬ ಪಾಟೀಲ ಅವರ ಹೆಸರು ಮುದ್ರಿಸಲಾಗಿತ್ತು.ಆದರೆ, ಅವರು ಯಾರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ.

ಸರ್ಕಾರದ ವತಿಯಿಂದ ನಡೆಯುವ ಜಯಂತಿ ಕಾರ್ಯಕ್ರಮಗಳಿಗೆ ಸಚಿವರು ಬರದಿದ್ದರೆ ಹೇಗೆ? ಸಮುದಾಯಗಳ ಬೇಡಿಕೆ ಆಲಿಸುವವರಾರು ಎಂದು ಸಮಾರಂಭದಲ್ಲಿ ಪಾಲ್ಗೊಂಡ ಸಭಿಕರ ಪೈಕಿ ಕೆಲವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.