ಬೆಂಗಳೂರು: ನಗುನಗುತ್ತಾ ಬಿಂದಾಸ್ ಆಗಿ ಕೋರ್ಟ್ ಒಳಗೆ ಪ್ರವೇಶಿಸಿದ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ್ ಅವರನ್ನು ಇಲ್ಲಿನ ಜನಪ್ರತಿನಿಧಿಗಳ ಕೋರ್ಟ್ ನ್ಯಾಯಾಧೀಶರು ತರಾಟೆ ತೆಗೆದುಕೊಂಡರು.
ಶಿವನಗೌಡ ನಾಯಕ್ 2008 ರಿಂದ 2013ರ ಅವಧಿಯಲ್ಲಿ ಸಚಿವರಾಗಿದ್ದ ವೇಳೆ ಗ್ರಂಥಾಲಯಕ್ಕೆ ಪುಸ್ತಕ ಖರೀದಿ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.
ಈ ಕುರಿತಂತೆ ಅವರು ಶುಕ್ರವಾರ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯಕ್ಕೆ ಹಾಜರಾದರು.
ನಗರದ ಸಿಟಿ ಸಿವಿಲ್ ಕೋರ್ಟ್ ಹಾಲ್ನ 82ನೇ ಕೋರ್ಟ್ ಒಳಗೆ ಪ್ರವೇಶಿಸಿದ ನಾಯಕ್ ನಗುನಗುತ್ತಲೇ ಬಿಡುಬೀಸಾಗಿ ಹೆಜ್ಜೆಯಿಟ್ಟುಕೊಂಡು ಬಂದರು. ಈ ವರ್ತನೆಗೆ ಗರಂ ಆದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರು, ‘ಏನ್ರೀ ನಿಮಗೆ ಕೋರ್ಟ್ನ ಗಾಂಭೀರ್ಯತೆಯ ಅರಿವೇ ಇದ್ದಂತಿಲ್ಲ. ಹೀಗಾ ನೀವು ಕೋರ್ಟ್ ಒಳಗೆ ಬರೋದು’ ಎಂದು ಕಿಡಿ ಕಾರಿದರು.
‘ಕೋರ್ಟ್ ಒಳಗೆ ಹೇಗೆ ನಡೆದುಕೊಳ್ಳಬೇಕು ಎಂಬ ಪರಿಜ್ಞಾನ ಇಲ್ಲದ ನೀವು ಶಾಸಕರಾಗಿ ಹೀಗೆ ನಡೆದುಕೊಂಡರೆ ಹೇಗೆ, ನಿಮ್ಮನ್ನು ಯಾಕೆ ಪೊಲೀಸ್ ಕಸ್ಟಡಿಗೆ ನೀಡಬಾರದು’ ಎಂದು ಪ್ರಶ್ನಿಸಿದರು.
ತಕ್ಷಣವೇ ಮಧ್ಯ ಪ್ರವೇಶಿಸಿದ ನಾಯಕ್ ಪರ ವಕೀಲರು, ಕೋರ್ಟ್ ಕ್ಷಮೆ ಕೇಳುವಂತೆ ನಾಯಕ್ ಅವರಿಗೆ ಸೂಚಿಸಿದರು. ವಕೀಲರ ಸಲಹೆಯಂತೆ ನಾಯಕ್ ಕೋರ್ಟ್ ಕ್ಷಮೆ ಯಾಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.