ಬೆಂಗಳೂರು:ಶಿವರಾಮ ಕಾರಂತ ಬಡಾವಣೆ ಭೂ ಸ್ವಾಧೀನ ಅಧಿಸೂಚನೆ ಪ್ರಶ್ನಿಸಿದ್ದ 39 ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಸಂಬಂಧ ಬಿ.ಎನ್.ಸದಾಶಿವ ಸೇರಿದಂತೆ 38 ಜನರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸೋಮವಾರ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
‘ಅರ್ಜಿದಾರರ ವಿರುದ್ಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂಬ ಈ ಮೊದಲಿನ ಮಧ್ಯಂತರ ಆದೇಶ ಡಿಸೆಂಬರ್ 29ರವರೆಗೆ ಜಾರಿಯಲ್ಲಿ ಇರುತ್ತದೆ’ ಎಂದು ನ್ಯಾಯಪೀಠ ಹೇಳಿದೆ.
‘ವಿಪರೀತ ವಿಳಂಬ ನೀತಿ ಅನುಸರಿಸುತ್ತಿರುವ ಬಿಡಿಎಗೆ, ಶಿವರಾಮ ಕಾರಂತ ಬಡಾವಣೆಯನ್ನು ಅಭಿವೃದ್ಧಿಪಡಿಸುವ ಇರಾದೆ ಇದ್ದಂತಿಲ್ಲ. ಭೂ ಸ್ವಾಧೀನಪಡಿಸಿಕೊಂಡಿರುವ ಜಮೀನುದಾರರಿಗೆ ಹಣ ಪಾವತಿಸಲು ಬಿಡಿಎ ಬಳಿ ಹಣ ಇಲ್ಲದಂತಾಗಿದೆ. ಈಗಾಗಲೇ ಹೈಕೋರ್ಟ್ ಏಕಸದಸ್ಯ ಪೀಠ ಈ ಮೊದಲು ಅರ್ಜಿದಾರರ ಪರ ನೀಡಿದ್ದ ಆದೇಶದ ಅನುಸಾರ ನಿರಾಕ್ಷೇಪಣ ಪತ್ರ ಪಡೆದಿರುವವರು ನಿವೇಶನಗಳನ್ನು ಮಾರಾಟ ಮಾಡಿದ್ದು ಅಂತಹ ಕಡೆ ಬಡಾವಣೆ ಅಭಿವೃದ್ಧಿ ಆಗುತ್ತಿದೆ. ಆದ್ದರಿಂದ, ಅಧಿಸೂಚನೆ ರದ್ದುಗೊಳಿಸಲು ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.
ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಗೆ ಸಂಬಂಧಿಸಿದಂತೆ 2008ರ ಡಿಸೆಂಬರ್ 31ರಂದು ಪ್ರಾಥಮಿಕ ಹಾಗೂ 2018ರ ನವೆಂಬರ್ 1ರಂದು ಅಂತಿಮ ಅಧಿಸೂಚನೆ ಅಧಿಸೂಚನೆ ಹೊರಡಿಸಲಾಗಿತ್ತು. 2014ರ ಜುಲೈ 26ರಂದು ಬಿಡಿಎ ಅರ್ಜಿದಾರರಿಗೆ ನಿರಾಕ್ಷೇಪಣ ಪತ್ರ ನೀಡಿತ್ತು.ಈ ಮೊದಲು, ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆಗಳರಡನ್ನೂ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.