ಬೆಂಗಳೂರು: ವಿಜಯನಗರ ಕ್ಷೇತ್ರದ ವ್ಯಾಪ್ತಿಯ ಗಾಳಿ ಆಂಜನೇಯ ದೇವಸ್ಥಾನ ವಾರ್ಡ್ನ ಬ್ಯಾಟರಾಯನಪುರ ಬಡಾವಣೆಯ ಶಾಲಾ ಕಾಲೇಜು ಸುತ್ತಮುತ್ತಲಿನ 12 ಅಂಗಡಿಗಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡಿದ್ದಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ಬುಧವಾರ ದಂಡ ವಿಧಿಸಿದರು. ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುತ್ತಿದ್ದ ಆರು ಮಂದಿಗೆ ದಂಡ ವಿಧಿಸಿದರು.
ಮೈಸೂರು ರಸ್ತೆ, ಹೊಸಕೆರೆ ಹಳ್ಳಿ ರಸ್ತೆ ಹಾಗೂ ಬ್ಯಾಟರಾಯನಪುರ ಬಡವಾಣೆಯಲ್ಲಿನ ಅಂಗಡಿಗಳ ಮೇಲೆದಕ್ಷಿಣ ವಲಯದ ವೈದ್ಯಾಧಿಕಾರಿ (ವಿಜಯನಗರ) ಡಾ. ಕೋಮಲಾ ನೇತೃತ್ವದಲ್ಲಿ ಬಿಬಿಎಂಪಿ ಅಧಿಕಾರಿಗಳ ತಂಡ ಪೊಲೀಸರ ನೆರವಿನೊಂದಿಗೆ ದಿಢೀರ್ ದಾಳಿ ನಡೆಸಿತು.
2003ರ ಕೋಟ್ಪಾ ಕಾಯ್ದೆ ಪ್ರಕಾರ ಶಾಲಾ ಕಾಲೇಜುಗಳ 100ಮೀ ಪ್ರದೇಶದ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವಂತಿಲ್ಲ. ಆದರೆ ಬ್ಯಾಟರಾಯನಪುರ ಬಡಾವಣೆಯ ಕೆಲವು ಬೇಕರಿಗಳು ಮತ್ತು ಟೀ ಅಂಗಡಿಯಲ್ಲಿ ಇವುಗಳನ್ನು ಮಾರಾಟ ಮಾಡಲಾಗುತ್ತಿತ್ತು.
‘12 ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳು ಪತ್ತೆಯಾಗಿವೆ. ಕೆಲವರು ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುತ್ತಿದ್ದುದೂ ಕಂಡುಬಂದಿದೆ. ತಪ್ಪಿತಸ್ಥರಿಗೆ ಒಟ್ಟು ₹ 6,800 ದಂಡ ವಿಧಿಸಲಾಗಿದೆ. ಮತ್ತೆ ತಂಬಾಕು ಉತ್ಪನ್ನ ಮಾರಾಟ ಮಾಡಿದರೆ ಉದ್ದಿಮೆ ಪರವಾನಗಿಯನ್ನು ರದ್ದುಗೊಳಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಡಾ.ಕೋಮಲಾ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.