ADVERTISEMENT

ವಿಧಾನಮಂಡಲ ಅಧಿವೇಶನ ಅ. 15ರವರೆಗೆ ವಿಸ್ತರಿಸಲು ಸಿದ್ದರಾಮಯ್ಯ  ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 11:53 IST
Last Updated 9 ಸೆಪ್ಟೆಂಬರ್ 2020, 11:53 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ‘ಮಹತ್ವದ ಹಲವು ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಯುವ ಅಗತ್ಯವಿರುವುದರಿಂದ ಇದೇ ತಿಂಗಳ 21ರಿಂದ ನಡೆಸಲು ಉದ್ದೇಶಿಸಿರುವ ವಿಧಾನಮಂಡಲ ಅಧಿವೇಶನವನ್ನು ಅ. 15ರವರೆಗೆ ವಿಸ್ತರಿಸಬೇಕು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭಾಧ್ಯಕ್ಷರು ಮತ್ತು ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

‘15ನೇ ವಿಧಾನಸಭೆಯ 7ನೇ ಅಧಿವೇಶನದ ಕಾರ್ಯಕಲಾಪಗಳನ್ನು ಸೆ. 21ರಿಂದ 30ರವರೆಗೆ ನಡೆಸಲು ಪ್ರಕಟಣೆ ಹೊರಡಿಸಲಾಗಿದೆ. ಈ ಪ್ರಕಟಣೆಯಂತೆ ಸೆ. 21, 22, 23, 24, 25, 28, 29 ಮತ್ತು 30 ರವರೆಗೆ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ 20ಕ್ಕೂ ಹೆಚ್ಚು ಸುಗ್ರೀವಾಜ್ಞೆಗಳು ಮತ್ತು 35ಕ್ಕೂ ಹೆಚ್ಚು ಮಸೂದೆಗಳನ್ನು ಮಂಡಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.’

‘ರಾಜ್ಯದ ಜನರು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪದೇ ಪದೇ ಪ್ರವಾಹಗಳು ಬಂದೆರಗುತ್ತಿವೆ. ಇದೇ ಮಾರ್ಚ್‍ನಿಂದ ಕೋವಿಡ್ ಸಾಂಕ್ರಾಮಿಕ ಹರಡಿಕೊಂಡು ರಾಜ್ಯದ ಜನರ ಬದುಕು ಹೈರಾಣಾಗಿಸಿದೆ. ಸುಮಾರು 6,500ಕ್ಕೂ ಹೆಚ್ಚು ಜನರು ಈ ಸೋಂಕಿನಿಂದ ಮೃತಪಟ್ಟಿದ್ದಾರೆ. ಪದೇ ಪದೇ ಕಾನೂನು ಸುವ್ಯವಸ್ಥೆಯ ಸಮಸ್ಯೆ ಉಂಟಾಗುತ್ತಿವೆ. ಜೊತೆಗೆ, ಡ್ರಗ್ಸ್‌ನಂಥ ಅಪಾಯಕಾರಿ ಚಟುವಟಿಕೆ ರಾಜ್ಯವನ್ನು ಆವರಿಸಿಕೊಂಡಿವೆ’

ADVERTISEMENT

‘ಇಂಥ ಸನ್ನಿವೇಶದಲ್ಲಿ ಅಧಿವೇಶನವನ್ನು ನಡೆಸಲಾಗುತ್ತಿದೆ. ಆದರೆ, ಅಧಿವೇಶನದ ಸಮಯ ಮಾತ್ರ ಯಾವುದಕ್ಕೂ ಸಾಕಾಗುವುದಿಲ್ಲ. ಜನರ ಮೇಲೆ ಕಾಳಜಿ ಇಲ್ಲದೆ ನೆಪ ಮಾತ್ರಕ್ಕೆ ಅಧಿವೇಶನ ನಡೆಸಲು ಉದ್ದೇಶಿಸುವಂತೆ ಕಾಣಿಸುತ್ತಿದೆ. ಜನವಿರೋಧಿಯಾದ ಹಲವು ಸುಗ್ರೀವಾಜ್ಞೆಗಳನ್ನು ಚರ್ಚೆಯನ್ನೇ ನಡೆಸದೆ ಅಂಗೀಕಾರ ಪಡೆಯಲು ಯತ್ನಿಸುತ್ತಿರುವುದು ಅತ್ಯಂತ ಜನದ್ರೋಹಿ, ಬೇಜವಾಬ್ದಾರಿಯುತ ಮತ್ತು ದುಷ್ಟತನದ ಪರಮಾವಧಿಯಂತೆ ಕಾಣುತ್ತಿದೆ. ಸರ್ಕಾರ ಈ ವಿಚಾರದಲ್ಲಿ ಅತ್ಯಂತ ಅಸಂವಿಧಾನಿಕವಾಗಿ ನಡೆದುಕೊಳ್ಳುತ್ತಿದೆ’.

‘ಕರ್ನಾಟಕ ರಾಜ್ಯ ವಿಧಾನಮಂಡಲದ ಸರ್ಕಾರಿ ಕಾರ್ಯಕಲಾಪಗಳ ನಿರ್ವಹಣೆ ಕಾಯ್ದೆ 2005’ರ ಸೆಕ್ಷನ್ 3ರ ಪ್ರಕಾರ ಕಡ್ಡಾಯವಾಗಿ 60 ದಿನಗಳಿಗೆ ಕಡಿಮೆ ಇಲ್ಲದಂತೆ ಪ್ರತಿವರ್ಷ ಅಧಿವೇಶನಗಳನ್ನು ನಡೆಸಬೇಕು. ಸೆಕ್ಷನ್ 4ರ ಪ್ರಕಾರ ವರ್ಷದಲ್ಲಿ ಒಟ್ಟು 4 ಅಧಿವೇಶನವನ್ನು ನಡೆಸಬೇಕು. ಜನವರಿಯಲ್ಲಿ 15, ಮಾರ್ಚ್ ತಿಂಗಳಲ್ಲಿ 20, ಜುಲೈ ತಿಂಗಳಲ್ಲಿ 15 ಮತ್ತು ನವೆಂಬರ್ ತಿಂಗಳಿನಲ್ಲಿ ಕನಿಷ್ಠ 10 ದಿನಗಳಷ್ಟು ಸೇರಿ ಒಟ್ಟು ಕನಿಷ್ಠ 60 ದಿನಗಳಷ್ಟು ಅಧಿವೇಶನ ನಡೆಸಬೇಕಾಗುತ್ತದೆ. ಆದರೆ, ಬಿಜೆಪಿ ಆಡಳಿತದ ಸರ್ಕಾರ ಸಂಸದೀಯ ವ್ಯವಸ್ಥೆಯನ್ನು ನಿರಂತರವಾಗಿ ಹಾಳುಗೆಡವುತ್ತಿದೆ. ಅಧಿವೇಶನಗಳನ್ನು ಕರೆದು ಚರ್ಚೆ ನಡೆಸುವುದನ್ನು ನಾಮ್‌ಕಾವಸ್ತೆ ಎಂದು ಭಾವಿಸಿ ವರ್ತಿಸುತ್ತಿದೆ’.

‘ಕೇವಲ ಎಂಟು ದಿನಗಳಲ್ಲಿ ಇಷ್ಟೊಂದು ಮಹತ್ವದ ವಿಚಾರಗಳನ್ನು ಚರ್ಚಿಸಲು ಸಾಧ್ಯವಿಲ್ಲ. ಹೀಗಾಗಿ, ಈ ಅಧಿವೇಶನವನ್ನು ಕನಿಷ್ಠ 3 ವಾರಗಳ ಕಾಲ, ಅಂದರೆ ಅ. 15 ರವರೆಗೆ ವಿಸ್ತರಿಸಬೇಕು’ ಎಂದು ಪತ್ರದಲ್ಲಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.