ಬೆಂಗಳೂರು: ಗಾಂಜಾ ಸಾಗಣೆ ಮಾಡುತ್ತಿದ್ದ ಅಂತರರಾಜ್ಯದ ಆರು ಆರೋಪಿಗಳನ್ನು ಕಾಟನ್ಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದು, ₹42 ಲಕ್ಷ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ರಾಜಸ್ಥಾನದ ಪಾಳಿ ಜಿಲ್ಲೆಯ ಬಾಸ್ ಗ್ರಾಮದ ಶಂಕರ್ಲಾಲ್ (38), ಒಡಿಶಾದ ಬಾಲೇಶ್ವರ ಜಿಲ್ಲೆಯ ಅನಿರುದ್ಧ್ ದಲೈ (38), ಜಾರ್ಖಂಡ್ನ ಗಾಟೋತಾಂಡ್ ಗ್ರಾಮದ ಬಸಂತ್ಕುಮಾರ್(35), ಮಹಾರಾಷ್ಟ್ರದ ಅಜಿತ್ಕುಮಾರ್ (43), ದೆಹಲಿಯ ದೀಪಕ್ ಕುಮಾರ್ (27), ಬಿಹಾರದ ವೈಶಾಲಿಯ ಅಮರನಾಥ್ ಜೈಸ್ವಾಲ್ (61) ಬಂಧಿತರು.
ಆರೋಪಿಗಳು ಬೆಂಗಳೂರಿನ ನಾಗಗೊಂಡನಹಳ್ಳಿ, ಚನ್ನಸಂದ್ರ, ಕೆ.ಪಿ.ಅಗ್ರಹಾರ, ಕಾಟನ್ಪೇಟೆಯಲ್ಲಿ ವಾಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಬಂಧಿತರಿಂದ 53.5 ಕೆ.ಜಿ ಗಾಂಜಾ, ಒಂಬತ್ತು ಮೊಬೈಲ್, 10 ಸಿಮ್ಕಾರ್ಡ್, ಒಂದು ಲ್ಯಾಪ್ಟಾಪ್ ಹಾಗೂ ಸರಕು ಸಾಗಣೆ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
‘ಕಾಟನ್ಪೇಟೆಯ ಪಶುವೈದ್ಯ ಆಸ್ಪತ್ರೆಯ ಹಿಂಭಾಗದಲ್ಲಿ ಸರಕು ಸಾಗಣೆ ಆಟೊದಲ್ಲಿ ಆರೋಪಿಗಳು ಡ್ರಗ್ಸ್ ಸಾಗಣೆ ಮಾಡುತ್ತಿದ್ದರು. ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.
‘ಶಂಕರ್ಲಾಲ್ ಹಾಗೂ ಅನಿರುದ್ಧ್ ದಲೈ ಪ್ರಕರಣದ ಸೂತ್ರಧಾರಿಗಳು. ಬಸಂತ್ಕುಮಾರ್, ಅಜಿತ್ಕುಮಾರ್, ದೀಪಕ್ ಕುಮಾರ್, ಅಮರನಾಥ್ ಜೈಸ್ವಾಲ್ ಎಂಬುವವರನ್ನು ಸೇರಿಸಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬಸ್ ಹಾಗೂ ಕಾರ್ಗೊ ಸೇವೆಗಳ ಮೂಲಕ ಬೆಂಗಳೂರಿಗೆ ಗಾಂಜಾವನ್ನು ತರಿಸಿಕೊಂಡು ಮಾರಾಟ ಮಾಡುತ್ತಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ವಿವರಿಸಿದರು.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.