ADVERTISEMENT

ಬೆಂಗಳೂರು | ರಾತ್ರಿ ಪಾಳಿಯಲ್ಲಿ ನಿದ್ರೆ; ಇಬ್ಬರು ಕಾನ್‌ಸ್ಟೆಬಲ್‌ಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 11 ಜುಲೈ 2023, 14:36 IST
Last Updated 11 ಜುಲೈ 2023, 14:36 IST
 ಕಾನ್‌ಸ್ಟೆಬಲ್‌(ಪ್ರಾತಿನಿಧಿಕ ಚಿತ್ರ)
ಕಾನ್‌ಸ್ಟೆಬಲ್‌(ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ರಾತ್ರಿ ಪಾಳಿಯ ಕೆಲಸದ ವೇಳೆ ನಿದ್ರಿಸುತ್ತಿದ್ದ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಕರ್ತವ್ಯ ಲೋಪ ಆರೋಪದಡಿ ಅಮಾನತುಗೊಳಿಸಲಾಗಿದೆ.

ಮಹದೇವಪುರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಎ.ಎನ್‌.ಜಯರಾಮ್‌ ಹಾಗೂ ಕಾನ್‌ಸ್ಟೆಬಲ್‌ ಈರಪ್ಪ ಉಂಡಿ ಅವರನ್ನು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಎಸ್.ಗಿರೀಶ್‌ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಜುಲೈ 9ರಂದು ಸಿಎಆರ್ (ನಗರ ಸಶಸ್ತ್ರ ಮೀಸಲು) ಡಿಸಿಪಿ ಗಸ್ತಿನಲ್ಲಿದ್ದ ವೇಳೆ ಠಾಣೆಗೆ ದಿಢೀರ್‌ ಭೇಟಿ ನೀಡಿದ್ದರು. ಆಗ ಇಬ್ಬರೂ ನಿದ್ರಿಸುತ್ತಿರುವುದು ಕಂಡುಬಂದಿದೆ. ಠಾಣೆಯಲ್ಲಿ ಸೆಂಟ್ರಿ ಕೆಲಸ ಮಾಡುತ್ತಿದ್ದವರನ್ನು ವಿಚಾರಣೆ ನಡೆಸಿದ್ದರು. ಅವರಿಂದಲೂ ಸಮರ್ಪಕ ಉತ್ತರ ದೊರೆತಿರಲಿಲ್ಲ. ನಿರ್ಲಕ್ಷ್ಯತನ ತೋರಿದ ಆರೋಪದ ಅಡಿ ಇಬ್ಬರೂ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಇಲಾಖಾ ವಿಚಾರಣೆ ಬಾಕಿ ಇರಿಸಿಕೊಂಡು ಅಮಾನತು ಮಾಡಲಾಗಿದೆ. ಅಮಾನತಿನ ಅವಧಿಯಲ್ಲಿ ಜೀವನಾಧಾರ ಭತ್ಯೆಗೆ ಇಬ್ಬರೂ ಸಿಬ್ಬಂದಿಯೂ ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.