ಬೆಂಗಳೂರು: ಕೆಲವು ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಯವರು ‘ಸೀಟುಗಳು ಭರ್ತಿಯಾಗಿವೆ’ ಎಂಬ ಉತ್ತರ ನೀಡಲಾರಂಭಿಸಿದ್ದಾರೆ. ಇದರಿಂದಾಗಿ, ಈ ಕಾಲೇಜುಗಳಲ್ಲಿ ಮಕ್ಕಳಿಗೆ ಸೀಟು ಕೊಡಿಸಬೇಕು ಎಂಬ ಆಸೆ ಹೊತ್ತ ಪೋಷಕರು ಕಂಗಾಲಾಗಿದ್ದಾರೆ.
ಸಿಬಿಎಸ್ಇ, ಐಸಿಎಸ್ಇ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕೆಲ ಕಾಲೇಜುಗಳಲ್ಲಿ ದಾಖಲಾತಿ ಪ್ರಕ್ರಿಯೆ ಆರಂಭಿಸಿ ಪೂರ್ಣಗೊಳಿಸಲಾಗಿದೆ. ರಾಜ್ಯ ಪಠ್ಯದ ಫಲಿತಾಂಶ ಪ್ರಕಟವಾಗದಿದ್ದರೂ, ಮಧ್ಯ ವಾರ್ಷಿಕ ಮತ್ತು ಪೂರ್ವ ಸಿದ್ಧತಾ ಪರೀಕ್ಷೆಗಳ ಫಲಿತಾಂಶ ಆಧರಿಸಿ ಕೆಲ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ.
‘ನನ್ನ ಮಗಳು ಶೇ 78ರಷ್ಟು ಅಂಕ ಪಡೆದಿದ್ದಾಳೆ. ವಾಣಿಜ್ಯ ವಿಭಾಗಕ್ಕೆ ಸೇರಿಸಲು ಬೆಂಗಳೂರು ದಕ್ಷಿಣ ಮತ್ತು ಕೇಂದ್ರ ಭಾಗದ ಆರು ಕಾಲೇಜುಗಳಲ್ಲಿ ವಿಚಾರಿಸಿದೆ. ಸೀಟು ಭರ್ತಿಯಾಗಿವೆ ಎಂಬ ಉತ್ತರ ಬಂತು’ ಎಂದು ಪೋಷಕರೊಬ್ಬರು ಹೇಳಿದರು.
‘ಶೇ 69ರಷ್ಟು ಅಂಕ ಬಂದಿದ್ದು, ವಿಜ್ಞಾನ ವಿಷಯದಲ್ಲಿ ಹೆಚ್ಚು ಅಂಕಗಳಿವೆ. ಆದರೆ, ಶೇ 90ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗಷ್ಟೇ ಕಾಲೇಜುಗಳಲ್ಲಿ ಸೀಟು ನೀಡಲಾಗುತ್ತಿದೆ. ವಿಜ್ಞಾನ ವಿಷಯದಲ್ಲಿ ಆಸಕ್ತಿ ಇದ್ದರೂ ನಮ್ಮಂತವರು ಶಿಕ್ಷಣ ಮುಂದುವರಿಸಲು ಆಗುತ್ತಿಲ್ಲ’ ಎಂದು ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡರು.
‘ವೇಳಾಪಟ್ಟಿ ಪ್ರಕಟ ಮಾಡುವ ತನಕ ಪ್ರವೇಶ ಪ್ರಕ್ರಿಯೆ ಆರಂಭಿಸುವಂತಿಲ್ಲ. ಒಂದು ವೇಳೆ ಆರಂಭಿಸಿದ್ದರೆ ಅಥವಾ ಮುಕ್ತಾಯಗೊಳಿಸಿರುವ ಬಗ್ಗೆ ಪೋಷಕರು ಅಥವಾ ವಿದ್ಯಾರ್ಥಿಗಳಿಂದ ದೂರು ಬಂದರೆ ಅಂತಹ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಎಂ. ಕನಗವಲ್ಲಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.