ADVERTISEMENT

ವಾಮಾಚಾರ ಆರೋಪ: ಪತ್ನಿ ವಿರುದ್ಧ ಉದ್ಯಮಿ ದೂರು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2023, 22:35 IST
Last Updated 5 ಸೆಪ್ಟೆಂಬರ್ 2023, 22:35 IST
   

ಬೆಂಗಳೂರು: ವಾಮಾಚಾರ ನಡೆಸಿ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಪತ್ನಿ ವಿರುದ್ಧ ಉದ್ಯಮಿಯೊಬ್ಬರು ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಉದ್ಯಮಿ ದೇವ್ ಕುಮಾರ್(39) ಅವರು ನೀಡಿದ ದೂರಿನ ಮೇರೆಗೆ ಪತ್ನಿ ಎಂ.ಪಿ.ಐಶ್ವರ್ಯ, ಅತ್ತೆ ಮಹಾಲಕ್ಷ್ಮೀ ಮತ್ತು ಮಾವ ಮಂಜುನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಐಶ್ವರ್ಯ ಅವರು ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ.

‘ದೇವ್‌ಕುಮಾರ್ 2022ರ ಜೂನ್‌ 1ರಂದು ಐಶ್ವರ್ಯ ಅವರನ್ನು ಮದುವೆಯಾಗಿದ್ದರು. 2023ರ ಫೆ.22ರಂದು ಪ್ರವಾಸ ಮುಗಿಸಿಕೊಂಡು ಮನೆಗೆ ಬಂದಿದ್ದರು. ಅಂದು ಮನೆಯ ಶೌಚಾಲಯದಲ್ಲಿ ಬೂದಿ, ಕರ್ಪೂರ ಹರಡಿರುವುದು ಕಂಡು ಬಂದಿತ್ತು. ಪತ್ನಿ ತಮ್ಮ ಎರಡು ಹೆಬ್ಬರಳನ್ನು ಕತ್ತರಿಸಿಕೊಂಡಿದ್ದರು. ಮನೆಯ ಹಲವು ಕಡೆ ನಿಂಬೆಹಣ್ಣು, ಪೂಜೆ ಮಾಡಿದ ತೆಂಗಿನ ಕಾಯಿಗಳು ಪತ್ತೆಯಾಗಿದ್ದವು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಪತ್ನಿ ಮತ್ತು ಅತ್ತೆ ಅತ್ತಿಗುಪ್ಪೆಯ ಜೋತಿಷಿ ನಾಗೇಂದ್ರ ಮತ್ತು ಸ್ಮಶಾನದಲ್ಲಿ ಪೂಜೆ ಮಾಡುವ ಬಾಬು ಅವರನ್ನು ಭೇಟಿಯಾಗಿರುವುದು ಗೊತ್ತಾಗಿದೆ. ಕೆಲವರನ್ನು ವಿಚಾರಣೆ ನಡೆಸಿದಾಗ ವಾಮಾಚಾರ ನಡೆಸಿರುವುದು ತಿಳಿಯಿತು’ ಎಂದು ಹೇಳಿದ್ದಾರೆ.

‘ಈ ನಡುವೆ ನಮ್ಮ ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಮನೆಯ ಶ್ವಾನ ಸತ್ತಿದೆ. ವಾಮಾಚಾರ ಮಾಡಿ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವಭಯ ಹುಟ್ಟಿಸಿರುವ ಪತ್ನಿ ಹಾಗೂ ಅವರ ಕುಟುಂಬದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಉದ್ಯಮಿ ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.