ನೆಲಮಂಗಲ: ಇಲ್ಲಿಗೆ ಸಮೀಪದ ಕನ್ನಮಂಗಲ ಗೇಟ್ ಬಳಿಯ ಅಮ್ಮನಗುಡ್ಡದ ಆದಿಶಕ್ತಿ ದೇವಿಗೆ ಸಂಕ್ರಾಂತಿ ಪ್ರಯುಕ್ತ ವಿಶೇಷವಾಗಿ ನವಧಾನ್ಯಗಳು, ಎಳನೀರು, ಕಬ್ಬಿನ ಹಾಲು ಹಾಗೂ ಪಂಚಾಮೃತ ಅಭಿಷೇಕ ಮಾಡಲಾಯಿತು.
ನೂರಾರು ಭಕ್ತರ ಸಮ್ಮುಖದಲ್ಲಿ ಮೂರು ಗಂಟೆ ನಡೆದ ಅಭಿಷೇಕದ ಅವಧಿಯಲ್ಲಿ ದರ್ಪಣದ(ಕನ್ನಡಿ) ಸಹಾಯದಿಂದ ಸೂರ್ಯ ರಶ್ಮಿಯನ್ನು ಆದಿಶಕ್ತಿ ದೇವಿ ಮೂರ್ತಿಗೆ ಸ್ಪರ್ಶಿಸುವುದನ್ನು ಭಕ್ತರು ಕಣ್ತುಂಬಿಕೊಂಡು ಸಂಭ್ರಮಿಸಿದರು.
ಅಭಿಷೇಕದ ಎಳನೀರು, ನವಧಾನ್ಯದ ಪೊಟ್ಟಣಗಳನ್ನು ತೀರ್ಥ ಪ್ರಸಾದವನ್ನಾಗಿ ವಿತರಿಸಲಾಯಿತು. ಸುಮಂಗಲಿಯರಿಗೆ ಬಾಗಿನ ನೀಡಲಾಯಿತು. ಸಾವಿರಾರು ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನ ಅರ್ಚಕರಾದ ನರಸಿಂಹಮೂರ್ತಿ ದೇವಾಲಯದ ದಿನದರ್ಶಿಕೆಯೊಂದಿಗೆ ಅಭಿಷೇಕದ ನವಧಾನ್ಯಗಳ ಪೊಟ್ಟಣಗಳನ್ನು ವಿತರಿಸಿದರು.
ದೊಡ್ಡಬಳ್ಳಾಪುರದ ಮಾಜಿ ಶಾಸಕ ವೆಂಕಟರಮಣಯ್ಯ, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಚುಂಚೇಗೌಡ ಭಾಗವಹಿಸಿದ್ದರು.
ಪಟ್ಟಣದ ಅಯ್ಯಪ್ಪಸ್ವಾಮಿ, ಬಿನ್ನಮಂಗಲದ ಮುಕ್ತಿನಾಥೇಶ್ವರ, ಮಹಾಲಿಂಗೇಶ್ವರ, ವೆಂಕಟರಮಣಸ್ವಾಮಿ, ಕಾಶಿ ವಿಶ್ವನಾಥ ದೇವಾಲಯಗಳಲ್ಲಿ ವಿಶೇಷ ಪೂಜೆ ಪ್ರಸಾದ ವಿತರಿಸಲಾಯಿತು. ಸಂಜೆ ಬೆಳ್ಳಿ ಅಲಂಕೃತ ರಥದಲ್ಲಿ ಅಯ್ಯಪ್ಪಸ್ವಾಮಿ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.