ಬೆಂಗಳೂರು: ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರಿನಿಂದ ಹುಬ್ಬಳ್ಳಿ, ವಿಜಯಪುರ, ಬೆಳಗಾವಿಗೆ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸಂಚಾರ ಆರಂಭಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
ಎಸ್ಎಂವಿಟಿ ಬೆಂಗಳೂರು ಮತ್ತು ಬೆಳಗಾವಿಯ ನಡುವೆ ಆಗಸ್ಟ್ 7, 9, 14 ಮತ್ತು 16ರಂದು ಒಟ್ಟು ನಾಲ್ಕು ಟ್ರಿಪ್ ಇರಲಿದೆ. ಸಂಜೆ 7ಕ್ಕೆ ಎಸ್ಎಂವಿಟಿಯಿಂದ ಹೊರಟು ಮರುದಿನ ಬೆಳಿಗ್ಗೆ 8.25ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿಯಿಂದ ಆ.8,10,15, 17 ರಂದು ಸಂಜೆ 5.30ಕ್ಕೆ ಹೊರಟು, ಮರುದಿನ ಬೆಳಿಗ್ಗೆ 5ಕ್ಕೆ ಎಸ್ಎಂವಿಟಿ ತಲುಪಲಿದೆ.
ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್.ಎಂ.ಎಂ. ಹಾವೇರಿ, ಎಸ್.ಎಸ್.ಎಸ್. ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರದಲ್ಲಿ ಈ ರೈಲು ನಿಲುಗಡೆ ಹೊಂದಲಿದೆ.
ಎಸ್.ಎಸ್.ಎಸ್. ಹುಬ್ಬಳ್ಳಿ – ಎಸ್ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ ರೈಲು ಒಂದು ಟ್ರಿಪ್ ಹೊಂದಿದೆ. ಆ.14ರಂದು ಬೆಳಿಗ್ಗೆ 11ಕ್ಕೆ ಹುಬ್ಬಳ್ಳಿಯಿಂದ ರೈಲು ಹೊರಡಲಿದ್ದು, ಅಂದೇ ರಾತ್ರಿ 7.45ಕ್ಕೆ ಬೆಂಗಳೂರು ತಲುಪಲಿದೆ. ಎಸ್.ಎಂ.ಎಂ. ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆಯನ್ನು ನೀಡಲಾಗಿದೆ.
ಎಸ್ಎಂವಿಟಿ ಬೆಂಗಳೂರು- ವಿಜಯಪುರ- ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ ರೈಲು ಎರಡೂ ಕಡೆಯಿಂದ ತಲಾ ಒಂದು ಟ್ರಿಪ್ ಹೊಂದಿದೆ. ಆ.14ರಂದು ರಾತ್ರಿ 9ಕ್ಕೆ ಎಸ್ಎಂವಿಟಿಯಿಂದ ಹೊರಡಲಿದ್ದು, ಮರುದಿನ ಬೆಳಿಗ್ಗೆ 10.45ಕ್ಕೆ ವಿಜಯಪುರ ತಲುಪಲಿದೆ. ವಿಜಯಪುರದಿಂದ ಆ.17ರಂದು ಸಂಜೆ 5.30ಕ್ಕೆ ಹೊರಡಲಿದ್ದು, ಮರುದಿನ 8.10ಕ್ಕೆ ಬೆಂಗಳೂರು ತಲುಪಲಿದೆ.
ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಎಸ್.ಎಂ.ಎಂ. ಹಾವೇರಿ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆಯನ್ನು ನೀಡಲಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.