ಬೆಂಗಳೂರು: ‘ಸಾಮಾಜಿಕ ಭಿನ್ನಾಭಿಪ್ರಾಯಗಳನ್ನು ಮೀರಿ ಎಲ್ಲರನ್ನೂ ಬೆಸೆಯುವುದು ಕ್ರೀಡೆಯ ಉದ್ದೇಶ’ ಎಂದು ಕರ್ನಾಟಕ ಈಜು ಸಂಸ್ಥೆಯ ಅಧ್ಯಕ್ಷ ಗೋಪಾಲ್ ಹೊಸೂರು ಹೇಳಿದರು.
ವಸಂತ ವಿಹಾರ ವಾಟರ್ಪೋಲೊ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಶ್ರೀ ಕುಮಾರ್ ಅವರ ‘ಹ್ಯಾವಿಂಗ್ ಎ ಬಾಲ್ ಇನ್ ದಿ ವಾಟರ್ಸ್' ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕ್ರೀಡೆ ಸಾಮಾಜಿಕ ಸುಧಾರಣೆಗೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಈಜು ಕ್ರೀಡೆಯಲ್ಲಿ ಕರ್ನಾಟಕ ಮಾಡಿರುವ ಸಾಧನೆಗಳನ್ನು ನೆನಪಿಸಿಕೊಂಡರು.
‘ಮೂರು ದಶಕಗಳ ಅವಧಿಯಲ್ಲಿ ರಾಜ್ಯದ ಈಜುಪಟುಗಳು ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಬೆಂಗಳೂರು ಭಾರತದ ಈಜು ಕಾಶಿ ಎನಿಸಿಕೊಂಡಿದೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಭಾರತ ಕ್ರೀಡಾ ಪ್ರಾಧಿಕಾರದ ಕ್ಷೇತ್ರೀಯ ನಿರ್ದೇಶಕಿರಿತು ಎ. ಪಾಥಿಕ್ ಮಾತನಾಡಿ, ‘ವಾಟರ್ ಪೋಲೊ ಕ್ರೀಡೆಯನ್ನು ವಿಸ್ತಾರವಾಗಿ ಪರಿಚಯಿಸುವ ಕೃತಿ ಇದು. ಇಂತಹ ಪ್ರಯತ್ನಗಳು ಹೆಚ್ಚಾಗಬೇಕು. ಲೇಖಕರು ಸ್ವತಃ ಕ್ರೀಡಾಪಟುವಾಗಿದ್ದವರು. ಕ್ರೀಡಾಪತ್ರಕರ್ತರಾಗಿ ಕ್ರೀಡೆಯನ್ನು ನೋಡಿದ್ದಾರೆ. ಈ ಪುಸ್ತಕ ವಾಟರ್ ಪೋಲೊ ಪಟುಗಳಿಗೆ ಸ್ಫೂರ್ತಿಯಾಗಬಲ್ಲದು‘ ಎಂದು ಹೇಳಿದರು.
ಲೇಖಕ ಶ್ರೀಕುಮಾರ್ ಮಾತನಾಡಿದರು. ವಸಂತ ವಿಹಾರ ವಾಟರ್ ಪೋಲೊ ಕ್ಲಬ್ ಅಧ್ಯಕ್ಷ ಎಸ್. ಎನ್. ಪ್ರಭುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಈಜು ಸಂಸ್ಥೆಯ ಉಪಾಧ್ಯಕ್ಷ ಎಸ್. ಆರ್. ಸಿಂಧ್ಯಾ ಹಾಗೂ ಅಂತರರಾಷ್ಟ್ರೀಯ ವಾಟರ್ ಪೋಲೊ ತರಬೇತುದಾರ ಎಂ. ಎಸ್. ಭೂಷಣ್ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕೃಷ್ಣ ಗಂಗಾ ಸಂಸ್ಥೆ, ವ್ಯಾನಾ ಪ್ರೊಡಕ್ಷನ್ಸ್ ಮತ್ತು ವಿಶ್ವ ಪ್ರಿಯ ಸುಮಧುರ ಸ್ವರಗಳು ಸಂಸ್ಥೆಯವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.