
ಬೆಂಗಳೂರು: ‘ನಾರಾಯಣಗುರು ಅವರ ಚಿಂತನೆಗಳ ಅರಿವನ್ನು ಯುವ ಸಮುದಾಯದಲ್ಲಿ ಮೂಡಿಸಬೇಕು. ಈಡಿಗ, ಬಿಲ್ಲವ ಸಮುದಾಯಗಳಲ್ಲಿ ಒಗ್ಗಟ್ಟು ತರಲು ಸಾಂಸ್ಕೃತಿಕ ಚಟುವಟಿಕೆಗಳನ್ನು ಹೆಚ್ಚಾಗಿ ಆಯೋಜಿಸಬೇಕು’ ಎಂದು ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.
ಯುವ ವಾಹಿನಿ ಬೆಂಗಳೂರು ಘಟಕವು ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ಯುವ ವೈಭವ–2025 ಉದ್ಘಾಟಿಸಿ ಮಾತನಾಡಿದರು.
‘ಸಹಬಾಳ್ವೆ, ಅನ್ಯೋನ್ಯತೆ, ಏಕತೆ ಜತೆಗೆ ನಾವೆಲ್ಲರೂ ಒಂದೇ ಕರುಳು ಬಳ್ಳಿಗಳು ಎನ್ನುವ ಸಂದೇಶ ಸಾರಬೇಕು. ನಮ್ಮ ಸಮಾಜದ ಪ್ರತಿಭೆಗಳಿಗೆ ವೇದಿಕೆ ಸಿಗಬೇಕು ಎನ್ನುವ ಕಾರಣದಿಂದ ಸಂಘಟನೆ ಆಯೋಜಿಸಿರುವ ಯುವ ವೈಭವಕ್ಕೆ ಸಹಕಾರ ನೀಡಿದ್ದೇವೆ. ಮುಂದಿನ ವರ್ಷ ರಾಜ್ಯದ ಎಲ್ಲಾ ಭಾಗಗಳಲ್ಲೂ ಯುವ ವೈಭವ ಆಯೋಜಿಸಿ ಇನ್ನಷ್ಟು ಪ್ರತಿಭೆಗಳಿಗೆ ವೇದಿಕೆ ಸಿಗುವಂತಾಗಬೇಕು’ ಎಂದು ಸಲಹೆ ನೀಡಿದರು.
ಉದ್ಯಮಿ ಗೋವಿಂದಬಾಬು ಪೂಜಾರಿ ಮಾತನಾಡಿ, ‘ಈಡಿಗ, ಬಿಲ್ಲವ ಸಹಿತ ಸಮುದಾಯದ ಉಪಪಂಗಡಗಳನ್ನು ಒಟ್ಟುಗೂಡಿಸುವ ಪ್ರಯತ್ನಗಳು ನಡೆದರೂ ಕೆಲವರು ಬಳ್ಳಿಯನ್ನೇ ಕತ್ತರಿಸುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಅವಕಾಶ ಮಾಡಿಕೊಡದೇ ಯುವ ಸಮುದಾಯ ಒಂದುಗೂಡಬೇಕು. ಸಮುದಾಯದಲ್ಲಿ ಯಾರಾದರೂ ಕಷ್ಟದಲ್ಲಿದ್ದರೆ ಕೈ ಹಿಡಿಯುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು’ ಎಂದರು.
ನಾರಾಯಣಗುರು ವಿಚಾರ ವೇದಿಕೆಯ ಸತ್ಯಜಿತ್ ಸುರತ್ಕಲ್ ಮಾತನಾಡಿ, ‘ಈಡಿಗ, ಬಿಲ್ಲವ ಸಮಾಜದ ಉಪಜಾತಿಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳು ಲಭ್ಯವಾಗುವಂತೆ ಮಾಡಬೇಕು. 26 ಉಪ ಪಂಗಡಗಳನ್ನು ಮೇಲೆತ್ತುವ ಕಾರ್ಯ ಎಲ್ಲರಿಂದಲೂ ಆಗಬೇಕು’ ಎಂದು ತಿಳಿಸಿದರು.
ಉಡುಪಿಯ ಗೀತಾಂಜಲಿ ಸುವರ್ಣ, ಕಲಾವಿದೆ ದೀಕ್ಷಾ, ಯುವ ವಾಹಿನಿ ಬೆಂಗಳೂರು ಅಧ್ಯಕ್ಷ ಶಶಿಧರ ಕೋಟ್ಯಾನ್, ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ, ನಟಿ ಭವ್ಯಶ್ರೀ ಪೂಜಾರಿ, ಸುಧೀರ್ಕುಮಾರ್ ಪೆರಾಡಿ, ಭಾವನಾ, ಕಾರ್ತಿ ಉಪಸ್ಥಿತರಿದ್ದರು.
Cut-off box - ಯುವ ಪ್ರತಿಭೆಗಳ ಕಲರವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಯುವ ಕಲಾವಿದರು ಪ್ರತಿಭೆ ಅನಾವರಣಗೊಳಿಸಿದರು. ರಂಗಿನ ರಂಗೋಲಿ ಗೀತ ಗಾಯನ ಜ್ಞಾನರಂಗ ರಸಪ್ರಶ್ನೆ ಗುರುಸ್ಮೃತಿ ಭಾಷಣ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗಿಯಾಗಿ ಬಹುಮಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.