ADVERTISEMENT

ಪ್ರತಿಮೆ ಸ್ಥಾಪನೆ ಇಲ್ಲ: ಕೆಎಸ್‌ಎಚ್‌ಇಸಿ ಸಮ್ಮತಿ

ಉನ್ನತ ಶಿಕ್ಷಣ ಇಲಾಖೆಯ ಸೂಚನೆಗೆ ಕೆಎಸ್‌ಎಚ್‌ಇಸಿ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 20:45 IST
Last Updated 3 ಜೂನ್ 2019, 20:45 IST

ಬೆಂಗಳೂರು: ರಾಜ್ಯದ ಯಾವ ವಿಶ್ವವಿದ್ಯಾಲಯದ ಆವರಣದಲ್ಲೂ ಯಾರ ಪ್ರತಿಮೆಗಳನ್ನೂ ಸ್ಥಾಪಿಸಬಾರದು ಎಂಬ ಹೊಸ ಕಟ್ಟಾಜ್ಞೆಯನ್ನುಉನ್ನತ ಶಿಕ್ಷಣ ಇಲಾಖೆ ನೀಡಿದೆ.

ಇಲ್ಲಿ ಸೋಮವಾರ ನಡೆದ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳನ್ನೊಳಗೊಂಡ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ (ಕೆಎಸ್‌ಎಚ್‌ಇಸಿ) ಸಭೆಯಲ್ಲಿ ಸರ್ಕಾರದ ಕಟ್ಟಾಜ್ಞೆಗೆ ಸರ್ವಾನುಮತದ ಒಪ್ಪಿಗೆ ಸೂಚಿಸಲಾಗಿದೆ.

ಸಮಿತಿಯ ಈ ನಿರ್ಧಾರದಿಂದ ಬೆಂಗಳೂರು ವಿಶ್ವವಿದ್ಯಾಲಯ ಆಘಾತಕ್ಕೆ ಒಳಗಾಗಿದೆ. ಏಕೆಂದರೆ ವಿಗ್ರಹ ಸ್ಥಾಪನೆ ವಿವಾದ ಇಲ್ಲಿ ಹುಟ್ಟಿಕೊಂಡಿತ್ತು ಹಾಗೂ ಕೊನೆಗೆ ಸರಸ್ವತಿಯ ವಿಗ್ರಹವನ್ನು ಮೂಲ ಸ್ಥಾನದಲ್ಲೇ ಸ್ಥಾಪಿಸುವ ನಿರ್ಧಾರಕ್ಕೆ ಬರಲಾಗಿತ್ತು.

ADVERTISEMENT

‘ಅವರು ಹೊಸ ವಿಗ್ರಹವನ್ನು ಏನು
ಮಾಡುತ್ತಾರೋ ಎಂಬುದು ನಮಗೆ ಗೊತ್ತಿಲ್ಲ, ಸಭೆಯಲ್ಲಿ ಆಗಿರುವ ನಿರ್ಧಾರಕ್ಕೆ ಎಲ್ಲ ವಿಶ್ವವಿದ್ಯಾಲಯಗಳೂ ಬದ್ಧವಾಗಿರಬೇಕು. ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಲ್ಲಿ ಯಾವುದೇ ಧಾರ್ಮಿಕ, ಸಮಾಜ ಸುಧಾರಕರ ವಿಗ್ರಹಗಳ ಸ್ಥಾಪನೆಗೆ ಅವಕಾಶ ಇಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸಭೆಗೆ ತಿಳಿಸಿದರು.

ಆನ್‌ಲೈನ್‌ನಲ್ಲಿ ಅಂಕಪಟ್ಟಿ: ವಿಶ್ವವಿದ್ಯಾಲಯಗಳು ಮತ್ತು ಪದವಿ ಕಾಲೇಜುಗಳು ಆನ್‌ಲೈನ್‌ನಲ್ಲೇ ಅಂಕಪಟ್ಟಿಯನ್ನು ನೀಡುವ ವ್ಯವಸ್ಥೆಯನ್ನು ಡಿಸೆಂಬರ್‌ ಒಳಗೆ ಜಾರಿಗೆ ತರಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ವಿಟಿಯು ಈಗಾಗಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು, ಇತರ ವಿಶ್ವವಿದ್ಯಾಲಯಗಳೂ ವಿಟಿಯುನಿಂದ ಈ ಸೌಲಭ್ಯ ಪಡೆದುಕೊಳ್ಳಲು ತಿಳಿಸಲಾಯಿತು.‌

ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಯೋಗ, ಧ್ಯಾನವನ್ನು ಕಡ್ಡಾಯಗೊಳಿಸುವುದು, ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪ್ಲೇಸ್‌ಮೆಂಟ್‌ ಕೇಂದ್ರ ಸ್ಥಾಪಿಸುವುದು ಹಾಗೂ ಬಅತಿಥಿ ಉಪನ್ಯಾಸಕರ ನೇಮಕ ಸಂಬಂಧ ಪರಿಣಿತರ ಸಮಿತಿ ರಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.