ADVERTISEMENT

ಮಳೆ ತೊಡಕು: ಉಕ್ಕಿನ ಸೇತುವೆ ಉದ್ಘಾಟನೆ ಇನ್ನೂ ವಿಳಂಬ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 20:48 IST
Last Updated 9 ಆಗಸ್ಟ್ 2022, 20:48 IST
   

ಬೆಂಗಳೂರು: ಶಿವಾನಂದ ವೃತ್ತದ ಉಕ್ಕಿನ ಸೇತುವೆಯ ಅಂತಿಮ ಹಂತದ ಕಾಮಗಾರಿಗೆ ಮಳೆ ತೊಡಕಾಗಿದ್ದು, ಕಾರ್ಯಾರಂಭಕ್ಕೆ ಇನ್ನಷ್ಟು ದಿನ ಕಾಯಬೇಕಿದೆ.

ಹೈಕೋರ್ಟ್‌ ಹಸಿರು ನಿಶಾನೆ ತೋರಿದ ಬಳಿಕ ಕಾಮಗಾರಿಯನ್ನು ಬಿಬಿಎಂಪಿ ಚುರುಕುಗೊಸಿದ್ದು, ಆ.15ರಂದು ಉದ್ಘಾಟನಾ ನೆರವೇರಿಸಲು ಸಿದ್ಧತೆ ಮಾಡಿಕೊಂಡಿತ್ತು. ದಿನವೂ ಮಳೆ ಸುರಿಯುತ್ತಿರುವುದರಿಂದ ಡಾಂಬರ್ ಕಾಮಗಾರಿ ನಿರ್ವಹಿಸುವುದು ಕಷ್ಟ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

‘ತರಾತುರಿಯಲ್ಲಿ ಡಾಂಬರ್ ಹಾಕಿದರೆ ಕಿತ್ತು ಬರುವ ಸಾಧ್ಯತೆ ಇದೆ. ಆದ್ದರಿಂದ ಮಳೆ ನಿಂತ ಬಳಿಕವೇ ಡಾಂಬರ್ ಹಾಕಲಾಗುವುದು’ ಎಂದು ಪಾಲಿಕೆ ಯೋಜನಾ ವಿಭಾಗದ ಎಂಜಿನಿ ಯರ್‌ ಒಬ್ಬರು ಸ್ಪಷ್ಟಪಡಿಸಿದರು.

ADVERTISEMENT

2017ರ ಜೂನ್‌ನಲ್ಲಿ ಎಂ.ವೆಂಕಟರಾವ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ಕಾಮಗಾರಿ ಗುತ್ತಿಗೆ ವಹಿಸಿ ಬಿಬಿಎಂಪಿ ಕಾರ್ಯಾದೇಶ ನೀಡಿತ್ತು. 13 ತಿಂಗಳಲ್ಲಿ ಅಂದರೆ 2018ರ ಜುಲೈನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಕಾಲಮಿತಿ ನಿಗದಿ ಮಾಡಿತ್ತು. ಯೋಜನೆ ಜಾರಿಯಿಂದ ರಸ್ತೆ ಬದಿಯಿರುವ ಮರಗಳಿಗೆ ಕೊಡಲಿ ಬೀಳಲಿದೆ ಎಂದು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಇದರಿಂದ 2018ರಲ್ಲಿ ಮೂರು ತಿಂಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. ಅದರ ಜತೆಗೆ ಪದೇ ಪದೇ ಯೋಜನೆ ಬದಲಾಗಿದ್ದು ಕೂಡ ಕಾಮಗಾರಿ ವಿಳಂಬಕ್ಕೆ ಕಾರಣವಾಯಿತು ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.