ಬೆಂಗಳೂರು: ‘ಮಗಳನ್ನುನೋಡಲು ಅವಕಾಶ ಕೊಡುತ್ತಿಲ್ಲ’ ಎಂದು ಆರೋಪಿಸಿ ಐಪಿಎಸ್ ಅಧಿಕಾರಿಯಾಗಿರುವ ಪತ್ನಿ ಇಲಕಿಯಾ ಕರುಣಾಕರನ್ ಮನೆ ಎದುರು ಭಾನುವಾರ ಧರಣಿ ಕುಳಿತಿದ್ದ ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಎಸ್ಪಿ ಅರುಣ್ ರಂಗರಾಜನ್ ಅವರು ತಡರಾತ್ರಿ ಧರಣಿ ಕೈಬಿಟ್ಟಿದ್ದಾರೆ.
ವಸಂತನಗರದಲ್ಲಿರುವ ಸರ್ಕಾರಿ ನಿವಾಸದ ಎದುರು ಅರುಣ್ ಧರಣಿ ಕುಳಿತಿದ್ದರು. ಇಲಕಿಯಾ ಅವರು ಮನೆ ಬಾಗಿಲು ತೆರೆದು ಪತಿಯನ್ನು ನೋಡಲು ಹೊರಗೆ ಬಂದಿರಲಿಲ್ಲ. ನಗರದ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ನೀರು ಹಾಗೂ ಊಟ ಸಹ ಮುಟ್ಟಿರಲಿಲ್ಲ.
ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಪತ್ನಿ ಸಮೇತ ತಡರಾತ್ರಿ 2.30ರ ಸುಮಾರಿಗೆ ಸ್ಥಳಕ್ಕೆ ಬಂದಿದ್ದರು. ಇಬ್ಬರೂ ಸೇರಿ ಅರುಣ್ ಅವರ ಜೊತೆ ಮಾತುಕತೆ ನಡೆಸಿದರು. ‘ಮನೆ ಮುಂದೆ ಕುಳಿತುಕೊಳ್ಳುವುದು ಸರಿ ಅನ್ನಿಸುವುದಿಲ್ಲ. ಮಗಳನ್ನು ನೋಡಲು ನಾವೇ ಅವಕಾಶ ಮಾಡಿಕೊಡಿಸುತ್ತೇವೆ. ಸದ್ಯ ಇಲ್ಲಿಂದ ಎದ್ದೇಳಿ’ ಎಂದು ಕೋರಿದರು. ಅದಕ್ಕೆ ಒಪ್ಪಿದ ಅರುಣ್ ಧರಣಿ ಕೈಬಿಟ್ಟು ಗುಳೇದ್ ಜೊತೆ ಸ್ಥಳದಿಂದ ತೆರಳಿದರು.
ಸೋಮವಾರವೂ ಅರುಣ್ ಅವರು ನಗರದಲ್ಲಿ ಉಳಿದುಕೊಂಡಿದ್ದರು. ಸುದ್ದಿಗಾರರ ಸಂಪರ್ಕಕ್ಕೆ ಸಿಗಲಿಲ್ಲ. ಘಟನೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಗುಳೇದ್ ಸಹ ಲಭ್ಯರಾಗಲಿಲ್ಲ.
ವಿವಿಐಪಿ ಭದ್ರತಾ ವಿಭಾಗದ ಡಿಸಿಪಿ ಆಗಿರುವ ಇಲಕಿಯಾ ಹಾಗೂ ಕಲಬುರ್ಗಿ ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಎಸ್ಪಿ ಆಗಿರುವ ಅರುಣ್ ರಂಗರಾಜನ್ ತಮಿಳುನಾಡಿನವರು. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಅವರಿಗೆ ಹೆಣ್ಣು ಮಗುವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.