ಬೆಂಗಳೂರು: ಪುಂಡರ ಸಹವಾಸ ಮಾಡದಂತೆ ದೊಡ್ಡಪ್ಪ ಬೈದಿದ್ದಕ್ಕೆ ಬೇಸರಗೊಂಡು ಪಿಯುಸಿ ವಿದ್ಯಾರ್ಥಿ ಸಾಕೇತ್ ರೆಡ್ಡಿ (16) ಅಪಾರ್ಟ್ಮೆಂಟ್ ಸಮುಚ್ಚಯದ 12ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸರ್ಜಾಪುರ ಮುಖ್ಯರಸ್ತೆಯ ಕಾಲೇಜಿನಲ್ಲಿ ಓದುತ್ತಿದ್ದ ಸಾಕೇತ್, ಮನೆ ಸಮೀಪದ ಕೆಲ ಮಾದಕ ವ್ಯಸನಿಗಳ ಜತೆ ಸ್ನೇಹ ಬೆಳೆಸಿಕೊಂಡಿದ್ದ. ಈ ನಡುವೆ ಸರಿಯಾಗಿ ಕಾಲೇಜಿಗೂ ಹೋಗುತ್ತಿರಲಿಲ್ಲ ಎನ್ನಲಾಗಿದೆ.
‘ಸಾಕೇತ್ ತಂದೆ ಸುರೇಶ್ ರೆಡ್ಡಿ ಮಾರ್ಚ್ 20ರಂದು ಕೆಲಸದ ನಿಮಿತ್ತ ಹೈದರಾಬಾದ್ಗೆ ಹೋಗಿದ್ದರು. ಆತನ ತಮ್ಮ ಹಾಗೂ ತಾಯಿ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ಸಾಕೇತ್ ಸ್ನೇಹಿತರ ಜತೆ ಆಚೆ ಹೋಗಿದ್ದ. ಅದು ಆತನ ದೊಡ್ಡಪ್ಪನಿಗೆ ಗೊತ್ತಾಗಿತ್ತು’ ಎಂದು ಎಚ್ಎಸ್ಆರ್ ಲೇಔಟ್ ಪೊಲೀಸರು ಹೇಳಿದರು.
‘ಆತ ಮನೆಗೆ ಬರುತ್ತಿದ್ದಂತೆಯೇ ದೊಡ್ಡಪ್ಪ ಬೈದು ಬುದ್ಧಿ ಹೇಳಿದ್ದರು. ಅದೇ ಬೇಸರದಲ್ಲಿ ಕೋಣೆ ಸೇರಿದ್ದ ಸಾಕೇತ್, ದೊಡ್ಡಪ್ಪ ಕೆಲಸದ ನಿಮಿತ್ತ ಹೊರಗೆ ಹೋಗುತ್ತಿದ್ದಂತೆಯೇ ಮಹಡಿಗೆ ತೆರಳಿ ಹಾರಿದ್ದ. ಸೆಕ್ಯುರಿಟಿ ಗಾರ್ಡ್ಗಳು ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.