
ಹೆಸರಘಟ್ಟ: ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಬೆಂಗಳೂರು ಹಾಗೂ ತೋಟಗೆರೆಯ ಬಿಜಿಎಸ್ ಪದವಿಪೂರ್ವ ಕಾಲೇಜು ಸಹಭಾಗಿತ್ವದಲ್ಲಿ ‘ಐತಿಹಾಸಿಕ ಪರಂಪರೆ ಉಳಿಸಿ’ ಅಭಿಯಾನ ನಡೆಯಿತು.
ಅಭಿಯಾನ ಅಂಗವಾಗಿ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಸ್ವಚ್ಛತಾ ಕಾರ್ಯಕ್ರಮ ಈಚೆಗೆ ತೋಟಗೆರೆಯಲ್ಲಿ ನಡೆಯಿತು.
11 ಮತ್ತು 12ನೇ ಶತಮಾನದ ಚೋಳರ ಕಾಲದ ತಮಿಳು ಶಾಸನ, 10ನೇ ಶತಮಾನದ ಹಂದಿ ಬೇಟೆ ನಾಯಿ ಸ್ಮಾರಕ ವೀರಗಲ್ಲುಗಳನ್ನು ಗ್ರಾಮಸ್ಥರ ನೆರವಿನಿಂದ ಅರ್ಜುನರಾಯ ದೇವಾಲಯದ ಬಳಿ ಇರಿಸಲಾಗಿತ್ತು. ಸಂರಕ್ಷಿಸಿದ್ದ ಶಾಸನಗಳನ್ನು ದೇವಾಲಯದ ಆವರಣದಲ್ಲಿ ಸಿಮೆಂಟಿನಲ್ಲಿ ಪ್ಲಾಸ್ಟಿಂಗ್ ಮಾಡಿಸಿ, ಸಾರ್ವಜನಿಕರು ವೀಕ್ಷಿಸುವಂತೆ ಶಾಶ್ವತವಾಗಿ ಸಂರಕ್ಷಣೆ ಮಾಡಲಾಯಿತು. ದೇವಾಲಯದ ಸುತ್ತಮುತ್ತಲಿನ ಸ್ಥಳದಲ್ಲಿ ತೋಟಗೆರೆಯ ಬಿಜಿಎಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ಕೈಗೊಂಡರು.
ಕರ್ನಾಟಕ ಇತಿಹಾಸ ಅಕಾಡೆಮಿಯ ಕಾರ್ಯದರ್ಶಿ ಕೆ. ಧನಪಾಲ್ ಮಾತನಾಡಿ, ತಾವು ಸಂರಕ್ಷಿಸಿರುವ ವೀರಗಲ್ಲುಗಳು, ಮಾಸ್ತಿ ಕಲ್ಲುಗಳು, ಸಪ್ತ ಮಾತೃಕೆಯರ ಶಿಲ್ಪಗಳ ಬಗ್ಗೆ ಮಾಹಿತಿ ನೀಡಿದರು.
ಗೋಧಿ ಹಿಟ್ಟು ಹಾಕಿ ಶಾಸನಗಳನ್ನು ಸುಲಭವಾಗಿ ಓದುವ ಬಗೆಯನ್ನು ಶಾಸನ ತಜ್ಞ ಪಿ.ವಿ. ಕೃಷ್ಣಮೂರ್ತಿ ಹಾಗೂ ಡಾ.ಯುವರಾಜ್ ಅವರು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಅಲಯನ್ಸ್ ವಿಶ್ವವಿದ್ಯಾನಿಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ವಿವೇಕಾನಂದ ಸಜ್ಜನ್, ಇತಿಹಾಸ ಸಂಶೋಧಕರಾದ ಕೆ.ಆರ್.ಮಧುಸೂದನ್, ಎಂ.ನರೇಂದ್ರ, ಪ್ರಾಂಶುಪಾಲ ಆನಂದ್ ಕುಮಾರ್, ಮುಖ್ಯ ಶಿಕ್ಷಕರಾದ ಟಿ.ಎಸ್.ಮುನಿರಾಜು, ಎಂ. ನಟರಾಜು, ಗೋಪಾಲಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜು, ಸುಜಾತ, ಮಂಜುಳ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.