ಕೆಂಗೇರಿ: ಸಮಾಜದ ಅಗತ್ಯಗಳಿಗೆ ಪೂರಕವಾಗಿ ಅನ್ವೇಷಣೆಗಳು ಸಾಗಬೇಕು. ಆಗ ಮಾತ್ರ ಅನ್ವೇಷಣೆಗಳಿಗೆ ದೀರ್ಘಕಾಲದವರೆಗೂ ಆರ್ಥಿಕ ಲಾಭ ಹಾಗೂ ಮಾನ್ಯತೆ ದೊರಕುತ್ತದೆ’ ಎಂದು ಶಿಕ್ಷಣ ಸಂಸ್ಥೆಗಳ ಅನ್ವೇಷಣಾ ಕೋಶದ ರಾಷ್ಟ್ರೀಯ ಸಂಯೋಜಕ (ಐಐಸಿ) ದೀಪನ್ ಕುಮಾರ್ ಸಾಹು ಹೇಳಿದರು.
ಮಾನವ ಸಂಪನ್ಮೂಲ ಇಲಾಖೆಯ ಅನ್ವೇಷಣಾ ಕೋಶದ ವತಿಯಿಂದ ನಗರದ ಎಸಿಎಸ್ ಕಾಲೇಜಿನಲ್ಲಿ ಬುಧವಾರ ನಡೆದ ಉನ್ನತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
‘ಹಲವಾರು ಅನ್ವೇಷಣೆಗಳು ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಂತಹ ಅನ್ವೇಷಣೆಗಳಿಂದ ಯಾವುದೇ ಪ್ರಯೋಜನವಿಲ್ಲ. ಪರಿಸರ ಹಾಗೂ ಜನಸ್ನೇಹಿ ಅನ್ವೇಷಣೆಗಳತ್ತ ವಿದ್ಯಾರ್ಥಿಗಳು ಚಿತ್ತ ಹರಿಸಬೇಕು’ ಎಂದು ಹೇಳಿದರು.
ಎ.ಸಿ.ಎಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಮುರಳಿ, ‘ವಿದ್ಯಾರ್ಥಿಗಳ ತಾಂತ್ರಿಕ ಕೌಶಲಕ್ಕೆ ಒತ್ತು ನೀಡಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವತಿಯಿಂದ ಆರಂಭಿಸಿರುವ ಅನ್ವೇಷಣಾ ಕೋಶವು ಸಹಕಾರಿಯಾಗಿದ್ದು, ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಸಹಾಯಕವಾಗಿದೆ’ ಎಂದರು.
ರಾಜರಾಜೇಶ್ವರಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ವಿಜಯಾನಂದ್ ಮಾತನಾಡಿ, ‘ವಿದ್ಯಾರ್ಥಿಗಳು ಉದ್ಯೋಗದಾತರಾಗಿ ರೂಪುಗೊಳ್ಳಬೇಕು. ಉದ್ಯೋಗ ಅರಸಿ ಹೋಗುವುದು ತಪ್ಪಬೇಕು. ಅಂತಹ ಅವಕಾಶ ಹಾಗೂ ವಾತಾವರಣ ಸೃಷ್ಟಿಸಲು ಅನ್ವೇಷಣಾ ರಾಯಭಾರಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದರಿಂದ ವಿದ್ಯಾರ್ಥಿಗಳ ಅಭಿವೃದ್ಧಿಯೊಂದಿಗೆ ದೇಶದ ಅರ್ಥ
ವ್ಯವಸ್ಥೆಗೂ ಬಲ ದೊರೆಯಲಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.