ದಾಬಸ್ ಪೇಟೆ: ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಉಪನ್ಯಾಸಕಿ ಡಾ. ಸುಜಾ ಕೆ.ಶ್ರೀಧರ್ ಅವರು ಬಡ್ತಿ ಪಡೆಯಲು ಸಲ್ಲಿಸಿದ್ದ ‘ಆದಿ ದ್ರಾವಿಡ’ ಜಾತಿ ಪ್ರಮಾಣ ಪತ್ರವನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವು ಅಸಿಂಧುಗೊಳಿಸಿದೆ. ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚನೆ ನೀಡಿದೆ.
ನೆಲಮಂಗಲದ ಮಾಜಿ ಶಾಸಕ ಕೆ. ಶ್ರೀನಿವಾಸಮೂರ್ತಿ ಅವರ ಪತ್ನಿ ಸುಜಾ ಕೆ. ಶ್ರೀಧರ್ ಆರೋಪಿ.
ಸುಜಾ ಕೆ. ಶ್ರೀಧರ್ ಅವರು ಕೇರಳದವರಾಗಿದ್ದು, ಈಳವ ಸಮುದಾಯಕ್ಕೆ ಸೇರಿದವರು. ಬಡ್ತಿಗಾಗಿ ತನ್ನ ಜಾತಿಯ ಬದಲು ಪತಿಯ ಜಾತಿಯ ಹೆಸರಲ್ಲಿ ಪ್ರಮಾಣ ಪತ್ರ ಸಲ್ಲಿಸಿದ್ದರು.
ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯು ತನಿಖೆ ನಡೆಸಿತ್ತು. ಸುಳ್ಳು ಪ್ರಮಾಣ ಪತ್ರ ಎಂಬುದು ಸಾಬೀತಾಗಿದ್ದರಿಂದ ಆ ಪ್ರಮಾಣಪತ್ರವನ್ನು ಅಸಿಂಧುಗೊಳಿಸಲಾಗಿದೆ. ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಪಾಲನಾ ವರದಿ ಸಲ್ಲಿಸುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಸೂಚನೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.