ಬೆಂಗಳೂರು: ಮೆಟ್ರೊ ಪ್ರಯಾಣ ದರ ಏರಿಸುವ ಬದಲು ಇಳಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಒತ್ತಾಯಿಸಿದೆ.
ಪ್ರಯಾಣ ದರ ಏರಿಸುವಾಗ ಸಮಾಜದ ಪರಿಕಲ್ಪನೆಯನ್ನು ಮರೆಯಬಾರದು. ಎಲ್ಲ ಸಾರಿಗೆ ವಿಧಾನಗಳ ಹೆಚ್ಚಿನ ಸಾರಿಗೆ ವೆಚ್ಚ, ಕಳಪೆ ರಸ್ತೆಗಳು, ಸಂಚಾರ ದಟ್ಟಣೆ, ಮಾಲಿನ್ಯದಿಂದ ಬಳಲುತ್ತಿದ್ದ ನಗರದ ಜನರು ಮೆಟ್ರೊ ರೈಲು ಸೇವೆ ಲಭ್ಯವಾದ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ನಮ್ಮ ಮೆಟ್ರೊ ದರವು ದೆಹಲಿ ಮತ್ತು ಕೋಲ್ಕತ್ತಾ ಮೆಟ್ರೊಗಳಿಗಿಂತ ಅಧಿಕ ಇದೆ. ಮತ್ತಷ್ಟು ದರ ಹೆಚ್ಚಳವು ಸಾಮಾನ್ಯ ಜನರಿಗೆ ಸಮಸ್ಯೆ ಉಂಟು ಮಾಡಲಿದೆ ಎಂದು ಎಸ್ಯುಸಿಐ (ಸಿ) ಬೆಂಗಳೂರು ಜಿಲ್ಲಾ ಸಮಿತಿಯ ಪರವಾಗಿ ಎಂ.ಎನ್. ಶ್ರೀರಾಮ್ ಅವರು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
‘ಬಿಎಂಟಿಸಿ, ಕೆಎಸ್ಆರ್ಟಿಸಿಯಲ್ಲಿ ಮತ್ತು ಹಿಂದೆ ರೈಲಿನಲ್ಲಿ ಇದ್ದಂತೆ ಮೆಟ್ರೊದಲ್ಲಿಯೂ ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡಬೇಕು. ಪ್ರಯಾಣದರ ಇಳಿಸಬೇಕು. ಮೆಟ್ರೊ ನಿಲ್ದಾಣಗಳಲ್ಲಿ ವಾಹನ ನಿಲುಗಡೆ ಸಮಸ್ಯೆ ಸರಿಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.