ADVERTISEMENT

ಸುಡಾನ್ ಪ್ರಜೆಗಳಿಂದ ಕಾನ್‌ಸ್ಟೆಬಲ್‌ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 22:46 IST
Last Updated 9 ಮಾರ್ಚ್ 2020, 22:46 IST

ಬೆಂಗಳೂರು: ಹೆಬ್ಬಾಳ ಹೊರವರ್ತುಲ ರಸ್ತೆಯಲ್ಲಿ ಶನಿವಾರ ರಾತ್ರಿ ಸುಡಾನ್ ಪ್ರಜೆಗಳು ಹೊಯ್ಸಳ ಗಸ್ತು ವಾಹನದಲ್ಲಿದ್ದ ಕಾನ್‌ಸ್ಟೆಬಲ್‌ ವಿಜಯ್‌ಕುಮಾರ್ ದಾನೇನವರ್ (32) ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ.

ಅಮೃತಹಳ್ಳಿ ಠಾಣೆ ಕಾನ್‌ಸ್ಟೆಬಲ್ ಆಗಿರುವ ವಿಜಯ್‌ ಕುಮಾರ್ ಅವರ ಮುಖಕ್ಕೆ ತೀವ್ರ ಗಾಯವಾಗಿದ್ದು, ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಹೇಳಿಕೆ ಆಧರಿಸಿ ಸುಡಾನ್ ಪ್ರಜೆಗಳಾದ ಅಲ್ಪಾದುಲ್ಲ ಹಾಗೂಜಲಲ್ ಅಹಮ್ಮದ್ ಅಲ್ಸನ್ ಎಂಬುವರ ವಿರುದ್ಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

‘ವಿಜಯ್‌ಕುಮಾರ್ ಅವರು ಹೆಡ್‌ಕಾನ್‌ಸ್ಟೆಬಲ್ ಜೊತೆ ಹೊಯ್ಸಳ ವಾಹನದಲ್ಲಿ ಶನಿವಾರ ರಾತ್ರಿ ಗಸ್ತು ತಿರುಗುತ್ತಿದ್ದರು. ತಡರಾತ್ರಿ 1.30ರ ಸುಮಾರಿಗೆ ಹೊರವರ್ತುಲ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಆರೋಪಿಗಳು ಬೈಕ್ ನಿಲ್ಲಿಸಿಕೊಂಡು ನಿಂತಿದ್ದರು. ತಡರಾತ್ರಿಯಾಗಿದ್ದು ಮನೆಗೆ ಹೋಗುವಂತೆ ಕಾನ್‌ಸ್ಟೆಬಲ್ ಆರೋಪಿಗಳಿಗೆ ಹೇಳಿದ್ದರು’.

ADVERTISEMENT

‘ಕಾನ್‌ಸ್ಟೆಬಲ್ ಅವರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಅಷ್ಟರಲ್ಲೇ ಸ್ಥಳದಲ್ಲಿ ಸೇರಿದ್ದ ಜನರು ಆರೋಪಿಗಳನ್ನು ಹಿಡಿದುಕೊಂಡು, ಪೊಲೀಸರ ವಶಕ್ಕೆ ನೀಡಿದರು’ ಎಂದು ಮೂಲಗಳು ಹೇಳಿವೆ.

ಸುಡಾನ್‌ ಪ್ರಜೆಗಳು, ಅಪರಿಚಿತರು ಹಲ್ಲೆ ಮಾಡಿದ್ದಾರೆ ಪ್ರತಿ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.