ADVERTISEMENT

ಕಮಿಷನರ್ ಕಚೇರಿ ಕಟ್ಟಡದಲ್ಲಿ ಆತ್ಮಹತ್ಯೆ ಯತ್ನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 19:45 IST
Last Updated 5 ಫೆಬ್ರುವರಿ 2019, 19:45 IST

ಬೆಂಗಳೂರು: ಪ್ರೀತಿಸುತ್ತಿದ್ದವನು ಮದುವೆ ಆಗಲು ನಿರಾಕರಿಸಿದ್ದರಿಂದ ಬೇಸರಗೊಂಡು ಯುವತಿಯೊಬ್ಬರು ಕಮಿಷನರ್ ಕಚೇರಿ ಕಟ್ಟಡದ ಶೌಚಾಲಯದಲ್ಲೇ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಹತ್ತು ತಿಂಗಳಿನಿಂದ ಪ್ರೀತಿಯಲ್ಲಿ ಬಿದ್ದಿದ್ದ ಯುವತಿ, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು. ಆ ನಂತರ ಆತ ಮದುವೆ ಆಗಲು ನಿರಾಕರಿಸಿದ್ದರಿಂದ ಸಂತ್ರಸ್ತೆ ವನಿತಾ ಸಹಾಯವಾಣಿಯ ಮೊರೆ ಹೋಗಿದ್ದರು.

ಸಂತ್ರಸ್ತೆ ಜತೆ ಮೂರು ಬಾರಿ ಸಮಾಲೋಚನೆ ನಡೆಸಿದ್ದ ಸಹಾಯವಾಣಿ ಮುಖ್ಯಸ್ಥೆ ರಾಣಿ ಶೆಟ್ಟಿ, ನ್ಯಾಯ ದೊರಕಿಸಿಕೊಡುವ ಭರವಸೆ ಕೊಟ್ಟಿದ್ದರು. ಬಳಿಕ ಆ ಹುಡುಗನನ್ನೂ ಕರೆಸಿ ಮದುವೆ ಆಗುವಂತೆ ಸೂಚಿಸಿದ್ದರು.

ADVERTISEMENT

ಪೋಷಕರೊಂದಿಗೆ ಮಾತನಾಡಿ ಮಂಗಳವಾರ ಮದುವೆಯ ನಿರ್ಧಾರ ತಿಳಿಸುವುದಾಗಿ ಹೇಳಿದ್ದ ಆ ಹುಡುಗ, ಮಧ್ಯಾಹ್ನ ಕಮಿಷನರ್ ಕಚೇರಿಯಲ್ಲಿ ಸಂತ್ರಸ್ತೆಯನ್ನು ಭೇಟಿಯಾಗಿದ್ದ. ‘ಈಗಲೇ ಮದುವೆ ಆಗಲು ಸಾಧ್ಯವಿಲ್ಲ. ನನಗೆ ಸ್ವಲ್ಪ ಕಾಲಾವಕಾಶ ಬೇಕು’
ಎಂದಿದ್ದ.

ಆಗ ಶೌಚಾಲಯಕ್ಕೆ ತೆರಳಿ ಬಾಗಿಲು ಹಾಕಿಕೊಂಡ ಸಂತ್ರಸ್ತೆ, ಐದು ನಿಮಿಷ ಕಳೆದರೂ ಹೊರಗೆ ಬರಲಿಲ್ಲ. ಇದರಿಂದ ಅನುಮಾನಗೊಂಡ ಸಂಬಂಧಿಕರು, ಪೊಲೀಸರಿಗೆ ವಿಷಯ ತಿಳಿಸಿದರು. ಬಾಗಿಲು ಮುರಿದು ಒಳಗೆ ಹೋದಾಗ ಕೈ ಕುಯ್ದುಕೊಂಡು ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ‘ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ’ ಎಂದು ವೈದ್ಯರು ಹೇಳಿದ್ದಾರೆ.

**

ಹುಡುಗನನ್ನು ಹಿಂದೆ ವಿಚಾರಣೆ ನಡೆಸಿದ್ದಾಗ ಮದುವೆ ಆಗಲು ಒಪ್ಪಿಕೊಂಡಿದ್ದ. ಈಗ ವಂಚಿಸಿದರೆ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು
- ರಾಣಿ ಶೆಟ್ಟಿ, ಮುಖ್ಯಸ್ಥೆ, ವನಿತಾ ಸಹಾಯವಾಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.