ADVERTISEMENT

ವಿಧಾನಸೌಧ| ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಯತ್ನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 2:13 IST
Last Updated 25 ಜೂನ್ 2019, 2:13 IST
   

ಬೆಂಗಳೂರು: ವಿಧಾನಸೌಧದ ಕೊಠಡಿ ಸಂಖ್ಯೆ 332ರಲ್ಲಿ ಸೋಮವಾರ ಮಧ್ಯಾಹ್ನ ವ್ಯಕ್ತಿಯೊಬ್ಬರು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಚಿಕ್ಕಬಳ್ಳಾಪುರದ ಆನೂರು ಗ್ರಾಮ ಪಂಚಾಯಿತಿ ತಾತ್ಕಾಲಿಕ ಸಹಾಯಕ ಗ್ರಂಥಪಾಲಕ ರೇವಣ್ಣ ಕುಮಾರ್‌ ಆತ್ಮಹತ್ಯೆಗೆ ಯತ್ನಿಸಿದವರು. ವಿಧಾನಸೌಧ ಠಾಣೆಯ ಪೊಲೀಸರು ತಕ್ಷಣ ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ವಿಭಾಗದ ಡಿಸಿಪಿ ದೇವರಾಜ್, ‘ರೇವಣ್ಣ ಅವರ ಕೈ ಮತ್ತು ಕುತ್ತಿಗೆ ಮೇಲೆ ಗಾಯ
ವಾಗಿದೆ. ಆದರೆ, ಪ್ರಾಣಾಪಾಯ ಇಲ್ಲ’ ಎಂದರು.

ADVERTISEMENT

ಆತ್ಮಹತ್ಯೆಗೆ ಯತ್ನಿಸಿದ ಸ್ಥಳದಲ್ಲಿ ಆಧಾರ್ ಕಾರ್ಡ್, ಗುರುತಿನ ಚೀಟಿ ಸಿಕ್ಕಿದೆ. ಹಂಗಾಮಿ ನೌಕರರನ್ನು ಕಾಯಂ
ಗೊಳಿಸುವಂತೆ ಬೇಡಿಕೆ ಮುಂದಿಟ್ಟಿದ್ದು, ಸರ್ಕಾರದ ಗಮನ ಸೆಳೆಯಲು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಹೇಳಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ ಅಲ್ಲ, ಬಲಿದಾನ: ಆತ್ಮಹತ್ಯೆಗೆ ಯತ್ನಿಸುವ ಮೊದಲು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕ ಕ್ಷೇಮಾಭಿವೃದ್ಧಿ ಸಂಘದ ಲೇಟರ್ ಹೆಡ್‌ನಲ್ಲಿ ರೇವಣ್ಣಕುಮಾರ್ ಬರೆದಿರುವ ಪತ್ರ ಸಿಕ್ಕಿದೆ.

ಈ ಪತ್ರದಲ್ಲಿ ‘ನನ್ನ ಸಾವಿಗೆ ಸರ್ಕಾರವೇ ಕಾರಣ, ಇದು ದಾಖಲಾತಿ ಸಾವು. ಆತ್ಮಹತ್ಯೆ ಅಲ್ಲ, ಸರ್ಕಾರಕ್ಕೆ ನೀಡುತ್ತಿರುವ ಬಲಿದಾನ’ ಎಂದು ಬರೆದಿದ್ದಾರೆ.

‘ನನ್ನ ಸಾವಿಗೆ ನನ್ನ ಹತ್ತಿರ ದಾಖಲೆ ಇದೆ. ಸರ್ಕಾರ ಮೋಸ ಮಾಡಿರುವುದಕ್ಕೆ ಸಾಕ್ಷಿ ಇದೆ. ಮೂರು ವರ್ಷಗಳಿಂದ ಕನಿಷ್ಠ ವೇತನ ಜಾರಿ ಮಾಡದೆ ಸರ್ಕಾರ ನಮ್ಮ ಬದುಕನ್ನು ಬೀದಿಪಾಲು ಮಾಡಿದೆ. ಹಲವು ಬಾರಿ ನಮ್ಮ ಕಷ್ಟಗಳನ್ನು ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲರು, ಉಪಮುಖ್ಯಮಂತ್ರಿ, ಪ್ರಧಾನ ಕಾರ್ಯದರ್ಶಿ ಗ್ರಂಥಾಲಯ ಇಲಾಖೆ ನಿರ್ದೇಶಕರ ಬಳಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅದಕ್ಕೆ ‘ಸಾವೇ’ ನಮ್ಮಂತಹ ಬಡವರಿಗೆ ವರದಾನ ಅಥವಾ ಕೊನೆ ಅಸ್ತ್ರ ಎಂದು ತಿಳಿದಿದ್ದೇನೆ.

‘ದಯವಿಟ್ಟು ಕನಿಷ್ಠ ವೇತನ ಜಾರಿ ಮಾಡಿ ಆರು ಸಾವಿರ ಕುಟುಂಬಗಳನ್ನು ರಕ್ಷಿಸಿ ಮಾನ್ಯ ಮುಖ್ಯಮಂತ್ರಿಗಳೇ. ನನ್ನ ಅಂತ್ಯ ಸಂಸ್ಕಾರ ಮುಖ್ಯಮಂತ್ರಿಗಳಿಂದಲೇ ಆಗಬೇಕು ಎನ್ನುವುದು ನನ್ನ ಕೊನೆಯ ಆಸೆ. ನನ್ನ ಸಾವಿನ ನಂತರ ಮನೆಯಲ್ಲಿ ಫೋಟೋ ಹಾಕಬಾರದು. ಯಾರು ಅಳಬಾರದು, ಯಾವುದೇ ವಿಧಿವಿಧಾನಗಳನ್ನು ಮಾಡಬಾರದು. ನಮ್ಮೂರ ಕೆರೆಯಲ್ಲಿ ಸೀಮೆಣ್ಣೆ, ಕಟ್ಟಿಗೆ ಹಾಕಿ ಅಂತ್ಯಕ್ರಿಯೆ ಮಾಡಬೇಕು’ ಎಂದೂ ಈ ಪತ್ರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.