ADVERTISEMENT

ಹೆಸರಘಟ್ಟ: ವಿಜೃಂಭಣೆಯ ಸೂರ್ಯ ಲಕ್ಷ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 23:21 IST
Last Updated 8 ಮಾರ್ಚ್ 2024, 23:21 IST
ಬಸವಣ್ಣ ದೇವರ ಸನ್ನಿಧಾನದಲ್ಲಿ ಭಕ್ತಾದಿಗಳು ದೀಪಗಳನ್ನು ಬೆಳಗಿಸಿದರು.
ಬಸವಣ್ಣ ದೇವರ ಸನ್ನಿಧಾನದಲ್ಲಿ ಭಕ್ತಾದಿಗಳು ದೀಪಗಳನ್ನು ಬೆಳಗಿಸಿದರು.   

ಹೆಸರಘಟ್ಟ: ತೋಟಗೆರೆಯ ಬಸವಣ್ಣ ದೇವಸ್ಥಾನ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಹಿತಚಿಂತನಾ ಚಾರಿಟಬಲ್ ಟ್ರಸ್ಟ್, ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಸಹಭಾಗಿತ್ವದಲ್ಲಿ 11ನೇ ವರ್ಷದ ಸೂರ್ಯ ಲಕ್ಷದೀಪೋತ್ಸವ ವಿಜೃಂಭಣೆಯಿಂದ ನಡೆಯಿತು.

ಹಬ್ಬದ ಅಂಗವಾಗಿ ಬೆಳಿಗ್ಗೆ ವಿಶೇಷ ಪೂಜೆ ಕೈಂಕರ್ಯಗಳು, ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಹೋಮ, ಹವನ ಅಭಿಷೇಕ, ಮಹಾಮಂಗಳಾರತಿ ಹಾಗೂ ಸಂಜೆ 7ಕ್ಕೆ ಲಕ್ಷದೀಪೋತ್ಸವ ಜರುಗಿತು.

ಮೆರುಗು ತಂದ ದನಗಳ ಜಾತ್ರೆ: ಬಸವಣ್ಣ ದೇವಸ್ಥಾನದ ಕ್ಷೇತ್ರದಲ್ಲಿ ಐದು ವರ್ಷಗಳಿಂದ ದನಗಳ ಜಾತ್ರೆ ನಡೆಯುತ್ತಿದ್ದು ಜಾತ್ರೆಯಲ್ಲಿ ಹಳ್ಳಿಕಾರ್ ತಳಿಗಳ ಹೋರಿಗಳು ಗಮನ ಸೆಳೆದೆವು. ರೈತರು ಉತ್ತಮ ತಳಿಯ ಜೋಡಿ ಎತ್ತುಗಳಿಗೆ ಹಾರ, ಶಾಲು ಹೊದಿಸಿ, ಡೊಳ್ಳು ತಮಟೆ ವಾದ್ಯಗಳೊಂದಿಗೆ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿ ಸಂತಸಪಟ್ಟರು.

ADVERTISEMENT

ಉತ್ತಮ ರಾಸುಗಳಿಗೆ ಹಿತ ಚಿಂತನಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಾಲು ಹಲ್ಲು, ಎರಡು ಹಲ್ಲು, ನಾಲ್ಕು ಹಲ್ಲು, ಹಾರು ಹಲ್ಲು, ಕಡೆ ಹಲ್ಲು ಹಾಗೂ ಬೀಜದ ಹೋರಿ ವಿಭಾಗಗಳಲ್ಲಿ ಮೊದಲನೇ ಬಹುಮಾನವಾಗಿ ಆರು ರೈತರಿಗೆ ತಲಾ 100 ಗ್ರಾಂ ಬೆಳ್ಳಿ, ಎರಡನೇ ಬಹುಮಾನವಾಗಿ ಆರು ರೈತರಿಗೆ 50 ಗ್ರಾಂ ಬೆಳ್ಳಿ ಹಾಗೂ ಮೂರನೇ ಬಹುಮಾನವಾಗಿ ಆರು ಜನ ರೈತರಿಗೆ 25 ಗ್ರಾಂ ಬೆಳ್ಳಿ  ನೀಡಲಾಯಿತು. ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ರಾಸುಗಳ ರೈತರಿಗೆ ಬಾರುಕೋಲು, ದಂಡೆ, ಶಲ್ಯ, ಹಗ್ಗ, ಶಂಖ ನೀಡಲಾಯಿತು.

ನಂದಿಧ್ವಜ ಕುಣಿತ: ತೋಟಗೆರೆಯ ಆಂಜನೇಯ ಸ್ವಾಮಿ ಸನ್ನಿಧಿಯಿಂದ ಹೆಸರಘಟ್ಟದ ಮುಖ್ಯ ರಸ್ತೆಯ ಬೀದಿಯಲ್ಲಿ ಬಸವಣ್ಣನ ನೆಲೆ ದೇವರನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಇಟ್ಟು ಮೆರವಣಿಗೆ ಮಾಡಲಾಯಿತು. 

ಊಟದ ವ್ಯವಸ್ಥೆ: ಟ್ರಸ್ಟ್ ವತಿಯಿಂದ ದೇವಾಲಯದ ಆವರಣದಲ್ಲಿ ಸೂರ್ಯ ಲಕ್ಷದೀಪೋತ್ಸವಕ್ಕೆ ಆಗಮಿಸಿದ 12,000 ಭಕ್ತರಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಹಿತ ಚಿಂತನಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಪುಟ್ಟಮ್ಮ ವೆಂಕಟರಾಮಯ್ಯ ಟ್ರಸ್ಟಿಗಳಾದ ಚಂದ್ರಶೇಖರ್ ನರಸಿಂಹಮೂರ್ತಿ ವಿ. ರಾಮಸ್ವಾಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.