ಬೆಂಗಳೂರು: ಸಂಬಂಧಿಯ ಕೊಲೆ ಮಾಡಿ ಮೃತದೇಹವನ್ನು ಚರಂಡಿಗೆ ಎಸೆದು, ತಲೆಮರೆಸಿಕೊಂಡಿದ್ದ ಆರೋಪಿಯನ್ನು ವರ್ತೂರು ಠಾಣೆಯ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ನೇಪಾಳದ ದೀಪಕ್ ಬಹದ್ದೂರು ಕೊಲೆಯಾದ ವ್ಯಕ್ತಿ.
ದೀಪಕ್ ಅವರ ಪತ್ನಿ ಸುಷ್ಮಾ ಗುರಂಗ್ ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ, ವಿಕಾಸ್ ಬಹದ್ದೂರು ಅಲಿಯಾಸ್ ಇಂದ್ರ ಬಿಸ್ಟಾ (25) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ವರ್ತೂರು ಠಾಣಾ ವ್ಯಾಪ್ತಿಯ ಚಿಕ್ಕಬೆಳ್ಳಂದೂರು ಗ್ರಾಮದ 100 ಅಡಿ ರಸ್ತೆಯ ಚರಂಡಿಯಲ್ಲಿ ಮೇ 1ರಂದು ಸುಮಾರು 35 ವರ್ಷದ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಬಿಎನ್ಎಸ್ಎಸ್ ಸೆಕ್ಷನ್ 194(3) ಅಡಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು. ಈ ಮಧ್ಯೆ ನೇಪಾಳದ ಸುಷ್ಮಾ ಗುರಂಗ್ ಅವರು ಮೃತದೇಹವನ್ನು ಪರಿಶೀಲಿಸಿದ್ದರು. ತನ್ನ ಪತಿ ದೀಪಕ್ ಬಹದ್ದೂರ್ ಬಾಟ್ ಮೃತದೇಹ ಎಂಬುದಾಗಿ ತಿಳಿಸಿದ್ದರು. ಸಂಬಂಧಿಯೇ ಕೊಲೆ ಮಾಡಿರುವ ಅನುಮಾನ ವ್ಯಕ್ತಪಡಿಸಿದ್ದರು. ಆ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.
‘ದೀಪಕ್ ದಂಪತಿ ಠಾಣಾ ವ್ಯಾಪ್ತಿಯ ಬಡಾವಣೆಯೊಂದರಲ್ಲಿ ಬಾಡಿಗೆ ಮನೆಯಲ್ಲಿ ನೆಲಸಿದ್ದರು. ಕೌಟುಂಬಿಕ ಕಾರಣಕ್ಕೆ ದಂಪತಿ ಮಧ್ಯೆ ಗಲಾಟೆ ನಡೆಯುತ್ತಿತ್ತು. ಈ ವಿಚಾರವನ್ನು ಸುಷ್ಮಾ ಅವರು ತಮ್ಮ ಸಂಬಂಧಿಯೂ ಆಗಿರುವ ಆರೋಪಿ ವಿಕಾಸ್ಗೆ ತಿಳಿಸಿದ್ದರು. ಮನೆಗೆ ಬಂದಿದ್ದ ವಿಕಾಸ್, ಇಬ್ಬರಿಗೂ ಬುದ್ಧಿಮಾತು ಹೇಳಿದ್ದ. ಕೆಲವು ದಿನಗಳು ಕಳೆದ ಬಳಿಕ ದೀಪಕ್ನನ್ನು ಕರೆದೊಯ್ದು ಆರೋಪಿ ಹಲ್ಲೆ ನಡೆಸಿದ್ದ. ಹಲ್ಲೆಯಿಂದ ದೀಪಕ್ ಮೃತಪಟ್ಟಿದ್ದರು. ಮೃತದೇಹವನ್ನು ಚರಂಡಿಗೆ ಎಸೆದು ತಲೆಮರೆಸಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.
‘ಕೃತ್ಯ ನಡೆದ ಸ್ಥಳಗಳ ಸುತ್ತಮುತ್ತಲ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಳ್ಳಲಾಯಿತು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.