ಬೆಂಗಳೂರು:ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ, ಅವನ ಸಹೋದರಿಗೆಬೆದರಿಕೆ ಹಾಕಿದ ಘಟನೆ ನಡೆದ ನಗರದ ಕೋರಮಂಗಲದ ಆಡುಗೋಡಿಯ ಖಾಸಗಿ ಶಾಲೆಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶನಿವಾರ ದಿಢೀರ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ರೀತಿಯ ಘಟನೆ ಮರುಕಳಿಸಿದರೆ ಶಾಲೆಯ ಮಾನ್ಯತೆಯನ್ನೇ ರದ್ದುಪಡಿಸಿ, ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದರು.
ಶಿಕ್ಷಕಿಯೊಬ್ಬರು 7ನೇ ತರಗತಿ ವಿದ್ಯಾರ್ಥಿಯ ತಲೆಗೆ ಡಸ್ಟರ್ನಿಂದ ರಕ್ತ ಸುರಿಯುಂತೆ ಹೊಡೆದಿದ್ದಲ್ಲದೆ, ಅದೇ ಶಾಲೆಯಲ್ಲಿ ಓದುತ್ತಿರುವ ಆತನ ಅಕ್ಕನಿಗೆ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಶಾಲೆಯಿಂದ ಹೊರಹಾಕುವುದಾಗಿ ಶಾಲಾ ಆಡಳಿತ ವರ್ಗವೇ ಬೆದರಿಕೆ ಹಾಕಿದೆ. ಈ ಬಗ್ಗೆ ಪತ್ರಿಕಾ ವರದಿಗಳನ್ನು ಗಮನಿಸಿ ಶನಿವಾರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಹಲ್ಲೆಗೊಳಗಾದ ವಿದ್ಯಾರ್ಥಿ, ಆತನ ಸಹೋದರಿ, ತಾಯಿ ಮತ್ತು ಅಜ್ಜಿಯೊಂದಿಗೆ ಮಾತನಾಡಿ ಶಾಲೆಯಲ್ಲಿ ನಡೆದ ಘಟನೆಯಬಗ್ಗೆ ಸಚಿವರು ಮಾಹಿತಿ ಪಡೆದರು. ಆ ಶಾಲೆಯ ಶಿಕ್ಷಕರೊಬ್ಬರು ವಿದ್ಯಾರ್ಥಿಯ ಸೋದರಿ ಜೊತೆ ಅಶ್ಲೀಲವಾಗಿ ಮಾತನಾಡಿದ್ದನ್ನು ಗಂಭೀರವಾಗಿ ಪರಿಗಣಿಸಿ ಆ ಶಿಕ್ಷಕರನ್ನು ಕೆಲಸದಿಂದ ವಜಾ ಮಾಡುವಂತೆ ಆಡಳಿತ ಮಂಡಳಿಗೆ ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.