ಬೆಂಗಳೂರು: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಮನೆಯ ಕಾಂಪೌಂಡ್ನಲ್ಲಿ ಕೂಡಿಹಾಕಿದ್ದ ಆರೋಪಿಯನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಂದೀಪ್(30) ಬಂಧಿತ ಆರೋಪಿ.
ಶಿಕ್ಷಕಿ ಸುಶೀಲಮ್ಮ ಅವರು ನೀಡಿದ ದೂರಿನ ಮೇಲೆ ಆರೋಪಿ ವಿರುದ್ಧ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ್ದ ಆರೋಪದಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಸುಶೀಲಮ್ಮ ಅವರು ಬುಧವಾರ ಸಂಜೆ ಕೋತಿ ಹೊಸಹಳ್ಳಿ ಬಳಿ ಮನೆ ಮನೆ ಸಮೀಕ್ಷೆಗೆ ತೆರಳಿದ್ದರು. ಆಗ ಆರೋಪಿಯ ಮನೆಗೂ ತೆರಳಿದ್ದರು. ಜಾತಿ ಸಮೀಕ್ಷೆಗೆ ಬಂದಿದ್ದು, ಆಧಾರ್ ಕಾರ್ಡ್ ಸೇರಿ ಇನ್ನಿತರ ದಾಖಲಾತಿ ನೀಡುವಂತೆ ಮನೆಯಲ್ಲಿದ್ದವರ ಬಳಿ ಸುಶೀಲಮ್ಮ ಕೇಳಿದ್ದರು. ಮಾಹಿತಿ ಪಡೆದು ಆನ್ಲೈನ್ ಮೂಲಕ ಒಟಿಪಿ ಸಂಖ್ಯೆ ಪಡೆದುಕೊಂಡಿದ್ದರು. ಅದೇ ಸಂದರ್ಭದಲ್ಲಿ ಸಂದೀಪ್ ಮನೆಗೆ ಬಂದಿದ್ದರು. ಶಿಕ್ಷಕಿಯನ್ನು ಪ್ರಶ್ನೆ ಮಾಡಿದ್ದರು. ಸರ್ಕಾರದ ಆದೇಶದಂತೆ ಸಮೀಕ್ಷೆ ನಡೆಸಲು ಬಂದಿರುವುದಾಗಿ ಶಿಕ್ಷಕಿ ಹೇಳಿದ್ದರು ಎಂದು ಪೊಲೀಸರು ಹೇಳಿದರು.
‘ಗುರುತಿನ ಚೀಟಿ ತೋರಿಸಿದ್ದರೂ ನಂಬದ ವ್ಯಕ್ತಿ, ನೀವು ಯಾವ ಕಂಪನಿಯವರು? ನನ್ನ ತಾಯಿಯಿಂದ ಒಟಿಪಿ ಏಕೆ ಪಡೆದುಕೊಂಡಿದ್ದೀರಿ’ ಎಂಬುದಾಗಿ ಪ್ರಶ್ನೆ ಮಾಡಿದ್ದರು. ಗೇಟ್ ಬಂದ್ ಮಾಡಿ ಕೂಡಿ ಹಾಕಿದ್ದರು. ಕಂಪನಿ ಪ್ರತಿನಿಧಿಗಳನ್ನು ಕರೆಸುವಂತೆ ಸೂಚಿಸಿದ್ದರು. ಅದಾದ ಮೇಲೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದೆ. ಅವರು ಸ್ಥಳಕ್ಕೆ ಬಂದು ರಕ್ಷಿಸಿದರು’ ಎಂದು ಶಿಕ್ಷಕಿ ತಿಳಿಸಿದ್ದಾರೆ.
‘ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮನೆಯಲ್ಲಿ ತಾಯಿ ಹಾಗೂ ಮಗ ವಾಸವಿದ್ದರು ಎಂಬುದು ಗೊತ್ತಾಗಿದೆ. ಸಂದೀಪ್ ಗೊರಗುಂಟೆಪಾಳ್ಯ ಬಳಿ ಟೀ ಶಾಪ್ ನಡೆಸುತ್ತಿದ್ದಾರೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜೀತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.