ADVERTISEMENT

‘ಶಿಕ್ಷಕರಿಗೆ ಬೇಕು ಪಾಠ ಮಾಡುವ ವಾತಾವರಣ’

ಪದವೀಧರ ಶಿಕ್ಷಕರ ರಾಜ್ಯಮಟ್ಟದ ಪ್ರಥಮ ಶೈಕ್ಷಣಿಕ ಸಮ್ಮೇಳನದಲ್ಲಿ ಹೊರಟ್ಟಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 20:46 IST
Last Updated 14 ಫೆಬ್ರುವರಿ 2019, 20:46 IST
ಶೈಕ್ಷಣಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದ ಶಿಕ್ಷಕರ ಸಮೂಹ–ಪ್ರಜಾವಾಣಿ ಚಿತ್ರ
ಶೈಕ್ಷಣಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದ ಶಿಕ್ಷಕರ ಸಮೂಹ–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಶಿಕ್ಷಕರುಶಾಲೆಗಳಲ್ಲಿ ನೆಮ್ಮದಿಯಿಂದ ಪಾಠ ಮಾಡುವ ವಾತಾವರಣ ನಿರ್ಮಾಣವಾಗಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘವು ಗುರುವಾರ ಆಯೋಜಿಸಿದ್ದ ‘ಪದವೀಧರ ಶಿಕ್ಷಕರ ರಾಜ್ಯಮಟ್ಟದ ಪ್ರಥಮ ಶೈಕ್ಷಣಿಕ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.

‘ಕೆಲವು ಶಿಕ್ಷಕರು ಮಾಡುವ ತಪ್ಪುಗಳಿಂದಾಗಿ ಇಡೀ ಶಿಕ್ಷಕ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಹೆಚ್ಚಿನ ಸರ್ಕಾರಿ ಶಿಕ್ಷಕರು ಶಾಲೆಗೆ ಬರುವುದಿಲ್ಲ, ಸರಿಯಾಗಿ ಪಾಠ ಮಾಡುವುದಿಲ್ಲ ಎಂಬ ಭಾವನೆ ಸಾಮಾನ್ಯರಲ್ಲಿ ಮನೆಮಾಡಿದೆ. ಅದನ್ನು ಸುಳ್ಳಾಗಿಸುವಂತೆ ನೀವು ಕಾರ್ಯನಿರ್ವಹಿಸಿ. ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗುವಂತೆ ಮಾಡಿ’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಶಾಲೆಗಳ ನಿರ್ವಹಣೆಯಲ್ಲಿಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ (ಎಸ್‌ಡಿಎಂಸಿ) ಹಸ್ತಕ್ಷೇಪವನ್ನು ಕಡಿಮೆ ಮಾಡಬೇಕು. 2006ರ ನಂತರ ನೇಮಕವಾದ ಶಿಕ್ಷಕರಿಗೆ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್‌) ಅನ್ವಯಿಸಬಾರದು ಎಂದು ಶಿಕ್ಷಣ ವ್ಯವಸ್ಥೆ ಸುಧಾರಣಾ ಸಭೆಗಳಲ್ಲಿ ಒತ್ತಾಯಿಸುತ್ತಿದ್ದೇನೆ’ ಎಂದು ತಿಳಿಸಿದರು.

ಪ್ರಾಧ್ಯಾಪಕ ಸಂಗಮನಾಥ ಲೋಕಾಪುರ,‘ಮಾಹಿತಿಗಳನ್ನು ಸಂಗ್ರಹಿಸಿ, ವರದಿಗಳನ್ನು ಸಿದ್ಧಪಡಿಸಿ ಅಧಿಕಾರಿಗಳಿಗೆ ಕಳುಹಿಸುವುದೇ ಶಿಕ್ಷಕರ ಕೆಲಸವಾಗಿದೆ. ಹಿಂದೆ, ಶಿಕ್ಷಕರು ಮತ್ತು ಇಲಾಖಾ ಅಧಿಕಾರಿಗಳಿಗೆ ಸಂವೇದನೆ ಇತ್ತು. ಈಗ ಆ ಜಾಗದಲ್ಲಿ ಸಂಪಾದನೆ ತುಂಬಿಕೊಂಡಿದೆ. ಹಾಗಾಗಿ ಗುಣಮಟ್ಟ ಕುಸಿಯುತ್ತಿದೆ’ ಎಂದು ಉಪನ್ಯಾಸದಲ್ಲಿ ಉಲ್ಲೇಖಿಸಿದರು.

‘ದುಡ್ಡು ಕೊಡದಿದ್ದರೆ ಸರ್ಕಾರದ ಯಾವ ಕೆಲಸವೂ ಆಗಲ್ಲ. ಶಿಕ್ಷಣ ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿದೆ. ಎಷ್ಟೇ ಮಂದಿ ಪ್ರಧಾನಿ, ಮುಖ್ಯಮಂತ್ರಿಗಳು ಬಂದು–ಹೋದರೂ ವ್ಯವಸ್ಥೆ ಸುಧಾರಣೆಯಾಗಲ್ಲ’ ಎಂದು ಪರಿಷತ್‌ ಸದಸ್ಯ ಆರ್‌.ಚೌಡರೆಡ್ಡಿ ಬೇಸರಿಸಿದರು.

ಶಿಕ್ಷಕರ ಬೇಡಿಕೆಗಳು

* ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ, 6ರಿಂದ 8ನೇ ತರಗತಿ ಶಿಕ್ಷಕರ ವೃಂದದಲ್ಲಿ ಪರಿಗಣಿಸಿ, ಒಂದು ವೇತನ ಬಡ್ತಿ ನೀಡಬೇಕು
* ಮುಂಬಡ್ತಿ ಪ್ರಮಾಣವನ್ನು ಶೇ 25ರಿಂದ ಶೇ 75ಕ್ಕೆ ಹೆಚ್ಚಿಸಬೇಕು
* ಬಡ್ತಿಗಾಗಿ ಇರುವ ಪರೀಕ್ಷೆ ರದ್ದುಪಡಿಸಬೇಕು
* ಪದವೀಧರರಾದ ವರ್ಷ ಹೊರತುಪಡಿಸಿ, ನೇಮಕಾತಿ ಹೊಂದಿದಾಗಿನಿಂದ ಸೇವಾವಧಿ ಪರಿಗಣಿಸಿ ಬಡ್ತಿ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.