ADVERTISEMENT

ಬಿಬಿಎಂಪಿ ಶಾಲೆಗಳಿಗೆ ಶಿಕ್ಷಕರು: ಸಚಿವ ಸಂಪುಟದಲ್ಲಿ ನಿರ್ಧಾರ: ತುಷಾರ್‌ ಗಿರಿನಾಥ್

​ಪ್ರಜಾವಾಣಿ ವಾರ್ತೆ
Published 27 ಮೇ 2024, 23:27 IST
Last Updated 27 ಮೇ 2024, 23:27 IST
<div class="paragraphs"><p>ತುಷಾರ್‌ ಗಿರಿನಾಥ್ </p></div>

ತುಷಾರ್‌ ಗಿರಿನಾಥ್

   

ಬೆಂಗಳೂರು: ‘ಶಿಕ್ಷಣ ಇಲಾಖೆಯ ಎಸ್‌ಡಿಎಂಸಿ ಮೂಲಕ ಬಿಬಿಎಂಪಿ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ವಿಚಾರ ಸಚಿವ ಸಂಪುಟದ ಮುಂದಿದ್ದು, ಅಲ್ಲಿನ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ಡಿಟೆಕ್ಟೀವ್, ಸೆಕ್ಯುರಿಟಿ ಏಜೆನ್ಸಿಗಳಿಂದ ಶಿಕ್ಷಕರನ್ನು ಹೊರಗುತ್ತಿಗೆಯಲ್ಲಿ ಪಾಲಿಕೆಗೆ ತೆಗೆದುಕೊಳ್ಳುವ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ ತುಷಾರ್‌ ಗಿರಿನಾಥ್‌, ‘ಏಜೆನ್ಸಿ ಬದಲು ಎಸ್‌ಡಿಎಂಸಿ ಮೂಲಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಯೋಜಿಸಲಾಗಿತ್ತು. ಇದು ಆಗಬಹುದು, ಆಗದೆ ಇರಬಹುದು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಇದರ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಏಜೆನ್ಸಿಗಳ ಹೆಸರು ಡಿಟೆಕ್ಟೀವ್, ಸೆಕ್ಯುರಿಟಿ ಎಂದಿದೆ ಅಷ್ಟೇ. ಅವರು ಲಭ್ಯವಿರುವ ಶಿಕ್ಷಕರನ್ನೇ ಅವರ ಅರ್ಹತೆಯ ಆಧಾರದಲ್ಲಿ ಬಿಬಿಎಂಪಿಗೆ ಒದಗಿಸುತ್ತಿದ್ದಾರೆ. ನಮ್ಮಲ್ಲಿ ಹಲವು ವರ್ಷಗಳಿಂದ ಶಿಕ್ಷಕರಾಗಿರುವವರೇ ಬೇರೆಬೇರೆ ಏಜೆನ್ಸಿಗಳಿಂದ ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ಏಜೆನ್ಸಿ ಹೆಸರು ಮಾತ್ರ ಡಿಕೆಕ್ಟೀವ್‌ ಇದೆ. ಶಿಕ್ಷಕರು ಮಾತ್ರ ಅವರೇ’ ಎಂದು ಸಮಜಾಯಿಷಿ ನೀಡಿದರು.

‘ಶಿಕ್ಷಕರ ನೇಮಕ ಮಾಡಲು ಮಧ್ಯವರ್ತಿ ಬೇಕಾಗಿಲ್ಲ ಎಂಬ ಕಾನೂನು ಇದೆ. ನಾವು ನೇರವಾಗಿ ನೇಮಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಬಿಬಿಎಂಪಿ ವಿಚಾರದಲ್ಲೂ ಎಸ್‌ಡಿಎಂಸಿ ಮೂಲಕ ಮಾಡಬೇಕು. ಅದಾದರೆ ಏಜೆನ್ಸಿಗಳನ್ನು ರದ್ದು ಮಾಡುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.