ಬೆಂಗಳೂರು: ‘ಆನ್ಲೈನ್ ಬೋಧನೆ ಹೆಚ್ಚಾಗುವುದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಒಡನಾಟಕ್ಕೆ ಧಕ್ಕೆಯಾಗಲಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ನಗರದಲ್ಲಿ ಸೋಮವಾರ ಆಯೋಜಿಸಿದ್ದ 2022ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಹಾಗೂ ನಿಕಟಪೂರ್ವ ಪದಾಧಿಕಾರಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜ್ಯದಲ್ಲಿ 48 ಸಾವಿರ ಮತ್ತು ದೇಶದಲ್ಲಿ ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿವೆ. ತಂತ್ರಜ್ಞಾನವನ್ನು ಮೂಲಸೌಕರ್ಯ ಅಭಿವೃದ್ಧಿ ಮತ್ತು ಆಡಳಿತದಲ್ಲಿನ ಸುಧಾರಣೆಗೆ ಹೆಚ್ಚಾಗಿ ಬಳಕೆ ಮಾಡಿಕೊಳ್ಳಬೇಕೆ ಹೊರತು ಬೋಧನೆಗೆ ಅಲ್ಲ’ ಎಂದು ಪ್ರತಿಪಾದಿಸಿದರು.
‘ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಅವಿನಾಭಾವ ಸಂಬಂಧ ಇರುತ್ತವೆ. ಪಠ್ಯದ ಹೊರತಾಗಿಯೂ ವಿದ್ಯಾರ್ಥಿಗಳು ಮೌಲ್ಯಯುತ ಬದುಕು ಕಟ್ಟಿಕೊಳ್ಳಲು ಅದು ಪೂರಕವಾಗುತ್ತಿದೆ. ಬೋಧನೆ ಸಂಪೂರ್ಣವಾಗಿ ಆನ್ಲೈನ್ ಪದ್ಧತಿಯಾದರೆ ಶಿಕ್ಷಣ ಕೇವಲ ಯಾಂತ್ರಿಕವಾಗುತ್ತದೆ. ಮಾನವಿಕ ಸಂಬಂಧ ಹಾಳಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘900ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಆನ್ಲೈನ್ ತರಗತಿ ನಡೆಸುವ ಬಗ್ಗೆ ಯುಜಿಸಿ ತಿಳಿಸಿದೆ. ಇದು ಅತ್ಯಂತ ಆತಂಕಕಾರಿ ವಿಚಾರ. ಬೋಧನೆಗೆ ತಂತ್ರಜ್ಞಾನ ಪೂರಕ ಆಗಬೇಕೆ ಹೊರತು, ಅದೇ ಪ್ರಧಾನ ಆಗಬಾರದು’ ಎಂದು ಹೇಳಿದರು.
‘ಶಿಕ್ಷಕರ ಸಂಘಗಳು ಕೇವಲ ತಮ್ಮ ಸಮಸ್ಯೆ ಮತ್ತು ವರ್ಗಾವಣೆ ವಿಷಯಗಳಿಗೆ ಸೀಮಿತವಾಗಬಾರದು. ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಸಂಘಗಳು ಚಿಂತನೆ ನಡೆಸಿ ತಮ್ಮನ್ನು ತೊಡಿಗಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.