ಬೆಂಗಳೂರು: ‘ಕೊರೊನಾ ವೈರಸ್ ಹರಡಿಸಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಕರೆ ಕೊಟ್ಟು ಜೈಲು ಸೇರಿರುವ ಸಾಫ್ಟ್ವೇರ್ ಎಂಜಿನಿಯರ್ಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಜಾಮೀನು ಕೋರಿ ಟೆಕ್ಕಿ ಮೊಹಮ್ಮದ್ ಮುಜೀಬ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
‘ಅರ್ಜಿದಾರರು ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು ಇಂತಹ ಪೋಸ್ಟ್ ಗಳನ್ನು ಹಾಕುವ ಮೂಲಕ ಜನರ ಮಧ್ಯೆ ಭಯ ಹುಟ್ಟಿಸುವ ಪ್ರಯತ್ನ ನಡೆಸಿದ್ದಾರೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
‘ಅರ್ಜಿದಾರರು ಬಹರೈನ್ ಮತ್ತು ಕುವೈತ್ನಲ್ಲಿ ಕೆಲ ಕಾಲ ನೆಲೆಸಿರುವುದು ಹಾಗೂ ಪಾಕಿಸ್ತಾನದ ಕೆಲ ವಾಟ್ಸ್ ಆ್ಯಪ್ ನಂಬರ್ ಗಳಲ್ಲಿ ಸಕ್ರಿಯರಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಇವರು ಧಾರ್ಮಿಕ ಮೂಲಭೂತವಾದ ಹಾಗೂ ದೇಶ ವಿರೋಧಿ ಚಿಂತನೆ ಹೊಂದಿದ್ದಾರೆ. ಎನ್ಐಎ ಕೂಡಾ ಮುಜೀಬ್ ಸಂಪರ್ಕಗಳ ಕುರಿತು ತನಿಖೆ ನಡೆಸುತ್ತಿದೆ’ ಎಂದು ನ್ಯಾಯಪೀಠ ಹೇಳಿದೆ.
‘ಅರ್ಜಿದಾರ ದೇಶ ವಿರೋಧಿ ಹಾಗೂ ಮತೀಯ ಭಾವನೆಗಳಿಗೆ ಒಳಗಾಗಿದ್ದಾರೆ ಎಂಬುದೂ ಮೇಲ್ನೋಟಕ್ಕೆ ತಿಳಿಯುತ್ತದೆ. ಹೀಗಾಗಿ, ಜಾಮೀನು ನೀಡಲು ಇದು ಅರ್ಹ ಪ್ರಕರಣವಲ್ಲ’ ಎಂದು ನ್ಯಾಯಪೀಠ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.