ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಅಧಿಕ ಹಣ ಪಾವತಿಸುವಂತೆ ಒತ್ತಾಯಿಸಿದ ಕ್ಯಾಬ್ ಚಾಲಕ, ಗ್ರಾಹಕರೊಬ್ಬರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ನಡು ರಸ್ತೆಯಲ್ಲಿ ಹಲ್ಲೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಪದ್ಮನಾಭನಗರದ ಆರ್. ಕೆ. ಲೇಔಟ್ನಲ್ಲಿ ಈ ಘಟನೆ ನಡೆದಿದ್ದು, ಕ್ಯಾಬ್ ಚಾಲಕ ಕಾಂತರಾಜು ಅವರ ವರ್ತನೆಯಿಂದ ಬೇಸತ್ತ ಗ್ರಾಹಕ ಶುಭಂ ಅವರು ಘಟನೆ ಕುರಿತು ವಿಡಿಯೊ ಮಾಡಿ, ನಂತರ ‘ಎಕ್ಸ್’ ನಲ್ಲಿ ಅದನ್ನು ಪೋಸ್ಟ್ ಮಾಡಿ, ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
ಶನಿವಾರ ಬೆಳಿಗ್ಗೆ ತಮ್ಮ ಸಂಬಂಧಿಯೊಬ್ಬರಿಗಾಗಿ ಆರ್. ಕೆ. ಲೇಔಟ್ನಿಂದ ಶುಭಂ ಅವರು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಡ್ರಾಪ್ ಮುಗಿದ ಬಳಿಕ ಚಾಲಕ, ‘ನಿಗದಿತ ಅಂತರಕ್ಕಿಂತಲೂ 3 ಕಿಲೋಮೀಟರ್ ಹೆಚ್ಚುವರಿಯಾಗಿದೆ, ಆದ್ದರಿಂದ ಹೆಚ್ಚು ಹಣ ಕೊಡಿ’ ಎಂದು ಕೇಳಿದ್ದಾರೆ. ಇದಕ್ಕೆ ನಿರಾಕರಿಸಿದ ಶುಭಂ, ‘ಆ್ಯಪ್ನ ಪ್ರಕಾರ ಹಣ ಪಾವತಿಸುತ್ತೇನೆ, ಅಧಿಕ ಹಣ ಪಾವತಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.
ಇದೇ ವಿಚಾರಕ್ಕೆ ಕೆಲಕಾಲ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ಚಾಲಕ, ಕ್ಯಾಬ್ನಿಂದ ಇಳಿದು ಶುಭಂ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ್ದಾರೆ. ಸ್ಥಳೀಯರು ಇಬ್ಬರನ್ನೂ ಸಮಾಧಾನಪಡಿಸಿ ಸ್ಥಳದಿಂದ ಕಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.