ಬೆಂಗಳೂರು: ‘ವೈಜ್ಞಾನಿಕ ಸಂಶೋಧನೆಗಾಗಿ ಪ್ರಯೋಗಾಲಯಗಳಲ್ಲಿ ಪ್ರಾಣಿಗಳ ಬಳಕೆ ಕಡಿಮೆಯಾಗಬೇಕು’ ಎಂದು ಪ್ರಾಣಿ ವಿಜ್ಞಾನಿಗಳ ಪ್ರಯೋಗಾಲಯ ಸಂಘದ (ಎಲ್ಎಎಸ್ಎ) ಅಧ್ಯಕ್ಷ ಡಾ. ವಿಜಯಪಾಲ್ ಸಿಂಗ್ ಸಲಹೆ ನೀಡಿದರು.
ಪ್ರಾಣಿ ವಿಜ್ಞಾನಿಗಳ ಪ್ರಯೋಗಾಲಯ ಸಂಘ ಆಯೋಜಿಸಿದ್ದ ‘ಜಾಗತಿಕ ಜೈವಿಕ ವೈದ್ಯಕೀಯ ಸಂಶೋಧನೆಯಲ್ಲಿ ಇತ್ತೀಚಿನ ಬೆಳವಣಿಗೆಗಳು ಮತ್ತು ಪ್ರಾಣಿ ವಿಜ್ಞಾನ ಪ್ರಯೋಗದ ಕಲ್ಯಾಣ’ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಪ್ರಯೋಗ, ಸಂಶೋಧನೆಗಳಲ್ಲಿ 3ಆರ್ (ರಿಪ್ಲೇಸ್ಮೆಂಟ್, ರಿಡಕ್ಷನ್ ಮತ್ತು ರಿಫೈನ್ಮೆಂಟ್) ಪರಿಕಲ್ಪನೆಯಲ್ಲಿ ಪ್ರಾಣಿ ಬಳಕೆಯಾಗಬೇಕು. ಪ್ರಾಣಿ ವಿಜ್ಞಾನ ಪ್ರಯೋಗಾಲಯದ ಕೋರ್ಸ್ಗಳ ಬಗ್ಗೆ ಚರ್ಚೆಯಾಗಬೇಕು. ಪ್ರಾಣಿ ವಿಜ್ಞಾನಿಗಳು, ವೃತ್ತಿಪರರು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಈ ಸಮಾವೇಶ ವೇದಿಕೆ ಕಲ್ಪಿಸಿದೆ. ಇದರಲ್ಲಿ ಪ್ರಯೋಗಗಳಲ್ಲಿ ಪ್ರಾಣಿಗಳ ಬಳಕೆ, ಶೈಕ್ಷಣಿಕವಾಗಿ ಅರಿವು ಮೂಡಿಸುವ ವಿಧಾನಗಳು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯವಾಗಿ ಬಳಕೆಯಾಗುತ್ತಿರುವ ಪದ್ಧತಿಗಳ ಬಗ್ಗೆ ಚರ್ಚಿಸಬಹುದಾಗಿದೆ’ ಎಂದು ಹೇಳಿದರು.
ಪಶುವೈದ್ಯರಾದ ಡಾ. ಅರವಿಂದ ಇಂಗ್ಲೆ ಮತ್ತು ಡಾ. ಎಸ್.ಜಿ ರಾಮಚಂದ್ರ ಅವರಿಗೆ ‘ಡಿಪ್ಲೊಮೇಟ್ ಆಫ್ ಐಸಿಎಲ್ಎಎಂ’ ಬಿರುದು ಪ್ರದಾನ ಮಾಡಲಾಯಿತು.
ಎಲ್ಎಎಸ್ಎನ ಸಂಘಟನಾ ಕಾರ್ಯದರ್ಶಿ ಡಾ. ಆರ್.ಕೆ. ಶಕ್ತಿದೇವನ್, ಖಜಾಂಚಿ ಡಾ. ಎಸ್.ಪಿ. ಮುತ್ತುಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.