ದೊಡ್ಡಬಳ್ಳಾಪುರ: ಇಲ್ಲಿನ ಚಿಗರೇನಹಳ್ಳಿಯ ಎಂಎಸ್ಜಿಪಿ ಕಸ ವಿಲೇವಾರಿ ಘಟಕಕ್ಕೆ ಗುರುವಾರ ಬೆಳಿಗ್ಗೆಯಿಂದಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಸ ತುಂಬಿದ ಲಾರಿಗಳು ಬರಲು ಆರಂಭಿಸಿದವು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಲಾರಿಗಳನ್ನು ತಡೆದರು.
ಕಸದ ಲಾರಿಗಳನ್ನು ದೊಡ್ಡಬಳ್ಳಾಪುರ- ದಾಬಸ್ಪೇಟೆ ಹೆದ್ದಾರಿಯ ಮೂಗೇನಹಳ್ಳಿ ಕ್ರಾಸ್ನಲ್ಲಿ ಗುರುವಾರ ಬೆಳಿಗ್ಗೆ ಲಾರಿತಡೆದು, ಅದರ ಚಕ್ರದಲ್ಲಿನ ಗಾಳಿಯನ್ನು ತೆಗೆಯಲಾಯಿತು ಎಂದು ನವ ಬೆಂಗಳೂರು ಹೋರಾಟ ಸಮಿತಿ ಗೌರವ ಅಧ್ಯಕ್ಷ ಕೆ.ವಿ.ಸತ್ಯಪ್ರಕಾಶ್ ತಿಳಿಸಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಎಂಎಸ್ಜಿಪಿ ಕಸ ವಿಲೇವಾರಿ ಘಟಕ ಕುರಿತಂತೆ ಬುಧವಾರ ನಡೆದ ಚರ್ಚೆವೇಳೆ ಉತ್ತರಿಸಿದ್ದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ಕಸ ವಿಲೇವಾರಿ ಘಟಕ ಮುಚ್ಚಲು ಸಾಧ್ಯವಿಲ್ಲ. ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಕುರಿತಂತೆ ಮುಖ್ಯಮಂತ್ರಿ ಅವರೊಂದಿಗೆ ಸಭೆ ನಡೆಸಲಾಗುವುದು’ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಗುರುವಾರ ಬೆಳಿಗ್ಗೆಯಿಂದಲೇ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತುಂಬಿದ ಲಾರಿಗಳು ಗ್ರಾಮದತ್ತ ಮುಖಮಾಡಿವೆ.
ಕಸ ತುಂಬಿದ ಲಾರಿಗಳನ್ನು ಗ್ರಾಮಕ್ಕೆ ಬರಲು ಬಿಡುವುದಿಲ್ಲ.ಒಂದು ವೇಳೆ ಲಾರಿಗಳು ಬಂದರೆ ಮತ್ತೆ ಧರಣಿಆರಂಭಿಸಲಾಗುವುದು ಎಂದು ಸತ್ಯಪ್ರಕಾಶ್ ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.