ADVERTISEMENT

ಕುಮಾರಕೃಪಾ ಅತಿಥಿಗೃಹದ ವ್ಯವಸ್ಥಾಪಕ ಎತ್ತಂಗಡಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 19:40 IST
Last Updated 7 ಜನವರಿ 2023, 19:40 IST
   

ಬೆಂಗಳೂರು: ಸ್ಯಾಂಟ್ರೋ ರವಿ ತಂಡಕ್ಕೆ ಆಶ್ರಯ ನೀಡಿದ ಆರೋಪ‌ದ ಬೆನ್ನಲ್ಲೇ, ಕುಮಾರಕೃಪಾ ಅತಿಥಿಗೃಹದ ಹಿರಿಯ ವ್ಯವಸ್ಥಾಪಕ ಎಚ್‌.ಎಸ್‌. ದೇವರಾಜ್ ಅವರನ್ನು ಎತ್ತಂಗಡಿ ಮಾಡಲಾಗಿದೆ.

ಕರ್ನಾಟಕ ಪ್ರವಾಸೋದ್ಯಮ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ (ಪ್ರಭಾರ) ಆಗಿರುವ ದೇವರಾಜ್ ಅವರನ್ನು ನಿಗಮದ ಕೇಂದ್ರ ಕಚೇರಿಗೆ ನಿಯೋಜಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.‌

ಕುಮಾರಕೃಪಾ ಅತಿಥಿಗೃಹದಲ್ಲಿ ಸ್ಯಾಂಟ್ರೋ ರವಿ ವಾಸ್ತವ್ಯ ಹೂಡಿದ್ದ ಎಂಬ ಕಾರಣಕ್ಕೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರುಗಳು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಮ್ಮಿಶ್ರ ಸರ್ಕಾರ ಕೆಡವಿದ ಶಾಸಕರು ಮುಂಬೈನಲ್ಲಿದ್ದಾಗ ಅವರ ಮೋಜು ಮಸ್ತಿಗೆ ಸ್ಯಾಂಟ್ರೋ ರವಿ ಸಹಾಯ ಮಾಡಿದ್ದ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದರು.

ADVERTISEMENT

‘ಕುಮಾರಕೃಪಾ ಅತಿಥಿಗೃಹದಲ್ಲಿ ಸ್ಯಾಂಟ್ರೋ ರವಿ ವ್ಯವಹಾರ ಮಾಡುತ್ತಿದ್ದ. ಅವನಿಗೆ ಅಲ್ಲಿ ಕೊಠಡಿ ಕೊಟ್ಟವರು ಯಾರು? ಯಾರ ಶಿಫಾಸಿನ ಆಧಾರದಲ್ಲಿ ಕೊಠಡಿ ಕೊಟ್ಟಿದ್ದರು? ಸಮ್ಮಿಶ್ರ ಸರ್ಕಾರ ಉರುಳಿಸುವ ವೇಳೆ ಅವರನ್ನು ಯಾರು, ಎಲ್ಲಿಗೆ ಕರೆದುಕೊಂಡು ಹೋಗಿದ್ದರು ಎಂದು ತನಿಖೆ ಮಾಡಬೇಕು’ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದರು. ‘ಬಿಜೆಪಿ ಸರ್ಕಾರ ಸ್ಯಾಂಟ್ರೋ ರವಿಗೆ ಕುಮಾರಕೃಪಾ ಅತಿಥಿಗೃಹದಲ್ಲಿ ಕೊಠಡಿ ನೀಡಿ, ವ್ಯವಹಾರ ಮಾಡಲು ಅನುವು ಮಾಡಿಕೊಟ್ಟಿತ್ತು’ ಎಂದು ಆರೋಪಿಸಿ ಕಾಂಗ್ರೆಸ್‌ ಟ್ವೀಟ್ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.